ಮುಂಬೈ: ಮಹಾರಾಷ್ಟ್ರದ ದಕ್ಷಿಣ ಕೊಲ್ಹಾಪುರ ಕ್ಷೇತ್ರದ 34 ಗ್ರಾಮ ಪಂಚಾಯಿತಿಗಳುಜೂನ್ 6ರಂದು ವಿಧವಾ ಪದ್ಧತಿಯನ್ನು ನಿರ್ಮೂಲನೆ ಮಾಡುವ ಮಹತ್ವದ ನಿರ್ಣಯವನ್ನುಅಂಗೀಕರಿಸಲಿವೆ ಎಂದು ಕಾಂಗ್ರೆಸ್ ಶಾಸಕ ರಿತುರಾಜ್ ಪಾಟೀಲ್ ಶುಕ್ರವಾರ ತಿಳಿಸಿದ್ದಾರೆ.
‘ಪತಿ ಮೃತಪಟ್ಟಾಗ ಬಲವಂತವಾಗಿ ಪತ್ನಿಯ ಬಳೆ ಒಡೆಯುವ, ಹಣೆಯ ಕುಂಕುಮ ಅಳಿಸುವ, ಮಾಂಗಲ್ಯ ತೆಗೆಯುವ ಅನಿಷ್ಟ ಪದ್ಧತಿಯನ್ನು ತೊಲಗಿಸುವ ಬಗ್ಗೆ 34 ಗ್ರಾಮ ಪಂಚಾಯಿತಿಗಳ ಮನವೊಲಿಸಿದ್ದೇನೆ. ಈ ಬಗ್ಗೆ ಸರ್ಪಂಚ್, ಉಪ ಸರ್ಪಂಚ್ ಮತ್ತು ಗ್ರಾಮ ಸೇವಕರೊಂದಿಗೆ ಸಭೆ ನಡೆಸಿದ್ದೇನೆ’ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಮೇ 4ರಂದು ಕೊಲ್ಹಾಪುರದ ಹೆರ್ವಾಡ ಗ್ರಾಮದಲ್ಲಿ ಮೊದಲ ಬಾರಿ ಇಂಥದ್ದೊಂದು ಕ್ರಾಂತಿಕಾರಿ ಕ್ರಮ ಅನುಷ್ಠಾನಗೊಳಿಸಲಾಗಿದೆ. ಇದರಿಂದ ಪ್ರೇರಣೆಗೊಂಡು ದಕ್ಷಿಣ ಕೊಲ್ಹಾಪುರ ವಿಧಾನಸಭಾ ಕ್ಷೇತ್ರದ 34 ಗ್ರಾಮಪಂಚಾಯಿತಿಗಳ ಮನವೊಲಿಸಲಾಯಿತು’ ಎಂದು ತಿಳಿಸಿದ್ದಾರೆ.
ಜೂನ್ 6 ಯುದ್ಧವೀರ ಶಿವಾಜಿಗೆಛತ್ರಪತಿ ಎಂಬ ಬಿರುದು ಬಂದ ದಿನ. ಈ ದಿನವನ್ನು ‘ಶಿವ ರಾಜ್ಯಾಭಿಷೇಕ್ ದಿನ‘ ಎಂದೇ ಆಚರಿಸುತ್ತೇವೆ. ಇದೇ ದಿನ ಮಹತ್ವದ ನಿರ್ಣಯ ಅಂಗೀಕರಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.