ಮುಂಬೈ: ಇತ್ತೀಚೆಗೆ ಜಾರಿ ಮಾಡಲಾಗಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯಿದೆ (ಎಫ್ಇಒಎ) ಅಡಿ ಆಸ್ತಿ ವಶಕ್ಕೆ ಪಡೆಯುವುದು ತುಂಬಾ ಕಠಿಣವಾಗಿದೆ ಎಂದು ಉದ್ಯಮಿ ವಿಜಯ್ ಮಲ್ಯ ಅವರು ಬಾಂಬೆ ಹೈಕೋರ್ಟ್ಗೆ ಸೋಮವಾರ ತಿಳಿಸಿದ್ದಾರೆ.
ಹಣ ಅಕ್ರಮ ವರ್ಗಾವಣೆ ನಿಯಂತ್ರಣ ಕಾಯಿದೆ (ಪಿಎಂಎಲ್ಎ) ನ್ಯಾಯಾಲಯ ಜ.5 ರಂದು ನೀಡಿದ್ದ ಆದೇಶ ಪ್ರಶ್ನಿಸಿ ಮಲ್ಯ ಅವರು ಕಳೆದ ತಿಂಗಳು ಹೈಕೋರ್ಟ್ ಮೊರೆ ಹೋಗಿದ್ದರು. ಮಲ್ಯ ಅವರನ್ನುಎಫ್ಇಒ ಕಾಯಿದೆ ಅಡಿ ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಣೆ ಮಾಡಲಾಗಿತ್ತು.
ಈ ಕಾಯಿದೆ ಅನ್ವಯ ಯಾವುದೇ ವ್ಯಕ್ತಿಯನ್ನು ದೇಶಭ್ರಷ್ಟ ಎಂದು ಘೋಷಣೆ ಮಾಡಿದರೆ ಆತನ ಆಸ್ತಿಯನ್ನು ತನಿಖಾ ಸಂಸ್ಥೆ (ಜಾರಿ ನಿರ್ದೇಶನಾಲಯ) ವಶಕ್ಕೆ ಪಡೆದುಕೊಳ್ಳಬಹುದಾಗಿದೆ.
‘ಜಾರಿ ನಿರ್ದೇಶಾನಾಲಯ ಆಸ್ತಿಯನ್ನು ವಶಪಡಿಸಿಕೊಂಡರೆ ಸಾಲಮರುಪಾವತಿ ಮಾಡಬೇಕಾದವರಿಗೆ ಯಾವುದೇ ಸಹಾಯವಾಗುವುದಿಲ್ಲ’ ಎಂದು ಮಲ್ಯ ಅವರ ಪರ ವಕೀಲ ಅಮಿತ್ ದೇಸಾಯಿ ಅವರು ವಿಭಾಗೀಯ ನ್ಯಾಯಮೂರ್ತಿಗಳಾದ ಐ.ಎ. ಮೊಹಾಂತಿ ಮತ್ತು ಎ.ಎಂ.ಬದರ್ ಅವರಿಗೆ ಸೋಮವಾರ ತಿಳಿಸಿದರು.
‘ಆಸ್ತಿ ವಶಕ್ಕೆ ಪಡೆಯುವುದು ಕಠಿಣವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಬ್ಯಾಂಕು ಮತ್ತು ಸಾಲಪಡೆದವರ ಜತೆ ವ್ಯವಹರಿಸಬೇಕು. ಮಲ್ಯ ಅವರಿಗೆ ಆಸ್ತಿಗಳನ್ನು ಮತ್ತೆ ಪಡೆದುಕೊಳ್ಳಬೇಕು ಎಂಬ ಆಸೆ ಇಲ್ಲ’ ಎಂದು ದೇಸಾಯಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.