ನವದೆಹಲಿ: ಭವಿಷ್ಯದಲ್ಲಿ ಗೊಂದಲಗಳನ್ನು ತಡೆಯುವ ನಿಟ್ಟಿನಲ್ಲಿ ಜಾಮೀನು ಅರ್ಜಿಗೆ ಸಂಬಂಧಿಸಿದ ಎಲ್ಲಾ ವಿವರಗಳು ಮತ್ತು ಈ ಹಿಂದೆ ನೀಡಲಾಗಿರುವ ಆದೇಶಗಳ ಕುರಿತ ಮಾಹಿತಿಯನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಾದವನ್ನು ಸರಿಯಾಗಿ ಗ್ರಹಿಸುವ ನಿಟ್ಟಿನಲ್ಲಿ ವ್ಯವಸ್ಥೆಯಲ್ಲಿ ಸುಧಾರಣೆ ತರುವಂತೆ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ಪೀಠವು ಹೈಕೋರ್ಟ್ಗಳಿಗೆ ಸೂಚನೆ ನೀಡಿದೆ.
‘ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಕಾನೂನು ಪ್ರಕ್ರಿಯೆಗಳು ಸರಾಗವಾಗಿ ನಡೆಯುವಂತಿರಬೇಕು ಮತ್ತು ಅಸಂಬದ್ಧಗಳನ್ನು ತಡೆಯಬೇಕು. ಈ ದಿಸೆಯಲ್ಲಿ ನಾವು ಈ ಸೂಚನೆ ನೀಡಿದ್ದೇವೆ’ ಎಂದು ಪೀಠ ಹೇಳಿದೆ.
ಮಾದಕವಸ್ತು ಮತ್ತು ಸೈಕೋಟ್ರೋಪಿಕ್ ಸಬ್ಸ್ಟನ್ಸ್ ಕಾಯ್ದೆ ಅಡಿ ಪ್ರಕರಣ ಎದುರಿಸುತ್ತಿರುವ ಕುಶಾ ಡುರುಕಾ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ, ಅವರಿಗೆ ಈ ಹಿಂದೆ ಹೈಕೋರ್ಟ್ನಿಂದ ಜಾಮೀನು ದೊರೆತಿರುವುದನ್ನು ಮತ್ತು ಆಗ ಪ್ರಕರಣವು ವಿಚಾರಣೆ ಹಂತದಲ್ಲಿ ಇದ್ದದ್ದನ್ನು ಸುಪ್ರೀಂ ಕೋರ್ಟ್ ಗಮನಿಸಿತು.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ಗಳಿಗೆ ವಿವರಗಳನ್ನು ನಮೂದಿಸಲು ಸೂಚನೆ ನೀಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.