ವಿಶಾಖಪಟ್ಟಣ:ಪ್ರಧಾನಿ ನರೇಂದ್ರ ಮೋದಿ ಅವರೊಬ್ಬ ನಕಾರಾತ್ಮಕ ವ್ಯಕ್ತಿಯಾಗಿದ್ದು, ಅವರ ನೇತೃತ್ವದ ಸರ್ಕಾರ ದೇಶದ ದುರಂತ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹರಿಹಾಯ್ದಿದ್ದಾರೆ.
ಇಂಡಿಯಾ ಟುಡೆಸುದ್ದಿವಾಹಿನಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮೋದಿ ಅವರು ದೇಶದ ಆರ್ಥಿಕತೆಯನ್ನು ಹಾಳು ಮಾಡಿದ್ದಾರೆ. ಕೇಂದ್ರ ಸರ್ಕಾರದ ನೀತಿಗಳ ಮೂಲಕ ಬಿಜೆಪಿಯು ದೇಶವನ್ನು ನಾಶ ಮಾಡುತ್ತಿದೆ’ ಎಂದು ದೂರಿದ್ದಾರೆ.
‘ತಾನು ಬಹಳ ಸಮರ್ಥ ಎಂದು ಮೋದಿ ಹೇಳಿಕೊಳ್ಳುತ್ತಾರೆ. ಆದರೆ ದೇಶಕ್ಕಾಗಿ ಅವರೇನು ಮಾಡಿದ್ದಾರೆ? ಜನರು ಸರಿಯಾಗಿ ನಿದ್ದೆ ಮಾಡಲೂ ಆಗದಂತಹ ಪರಿಸ್ಥಿತಿ ಇದೆ. ಸ್ಟಾರ್ಟಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ ಎಲ್ಲ ಕೇವಲ ಘೋಷಣೆಗಳಷ್ಟೆ’ ಎಂದು ನಾಯ್ಡು ಹೇಳಿದ್ದಾರೆ.
‘ಮೋದಿ ಅವರು ದೇಶದ ಆರ್ಥಿಕತೆಯನ್ನು ಹಾಳು ಮಾಡಿದ ನಕಾರಾತ್ಮಕ ವ್ಯಕ್ತಿ. ಅವರಿಗಿಂತ ಬೇರೆ ಯಾರೇ ಆದರೂ ಉತ್ತಮ’ ಎಂದು ನಾಯ್ಡು ಹೇಳಿದ್ದಾರೆ.
ಸಿಬಿಐ, ಜಾರಿ ನಿರ್ದೇಶನಾಲಯಗಳಂತಹ ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಂಡು ಮೋದಿ ಸರ್ಕಾರ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ. ಮೋದಿ ಅವರು ಯಾವುದೇ ಸ್ವಾಯತ್ತ ಸಂಸ್ಥೆಗಳನ್ನೂ ಗೌರವಿಸುತ್ತಿಲ್ಲ. ಸಿಬಿಐಗಿಂತಲೂ ಆಂಧ್ರ ಪ್ರದೇಶದ ಏಜೆನ್ಸಿಗಳು ಚೆನ್ನಾಗಿ ಕಾರ್ಯನಿರ್ವಹಿಸುತ್ತಿವೆ. ಕೇಂದ್ರ ಸರ್ಕಾರಿ ಸಂಸ್ಥೆಗಳು ಉದ್ಯಮಿಗಳು, ರಾಜಕಾರಣಿಗಳನ್ನು ಬ್ಲ್ಯಾಕ್ಮೇಲ್ ಮಾಡುತ್ತಿವೆ ಎಂದೂ ನಾಯ್ಡು ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.