ನರೇಂದ್ರ ಮೋದಿ
(ಪಿಟಿಐ ಚಿತ್ರ)
ವಾರಾಣಸಿ: ‘ಪರಿವಾರ್ ಕಾ ಸಾಥ್ ಔರ್ ಪರಿವಾರ್ ಕಾ ವಿಕಾಸ್– ಇದು ಪ್ರತಿಪಕ್ಷಗಳು ಅನುಸರಿಸುವ ಏಕೈಕ ಮಂತ್ರ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಲೇವಡಿ ಮಾಡಿದರು.
ಸ್ವಕ್ಷೇತ್ರವಾದ ಉತ್ತರಪ್ರದೇಶದ ವಾರಾಣಸಿಗೆ ಭೇಟಿ ನೀಡಿದ್ದ ಮೋದಿ, ₹3800 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದರು. ‘ಕಳೆದ 10 ವರ್ಷದಲ್ಲಿ ಕಾಶಿ ಮಹತ್ತರ ಅಭಿವೃದ್ದಿಗೆ ಸಾಕ್ಷಿಯಾಗಿದೆ. ತನ್ನ ಪರಂಪರೆ ಉಳಿಸಿಕೊಳ್ಳುವ ಜತೆಗೆ ಆಧುನಿಕತೆಗೂ ತೆರೆದುಕೊಂಡಿದೆ. ಈಗ ಕಾಶಿ ಬರೀ ಪುರಾತನ ನಗರಿ ಮಾತ್ರವಲ್ಲ ಪ್ರಗತಿಪರ ನಗರಿಯೂ ಆಗಿದೆ’ ಎಂದರು.
‘ದೇಶಸೇವೆಯನ್ನೇ ಮಂತ್ರವಾಗಿಸಿಕೊಂಡು ನಾವು ಮುಂದುವರಿಯುತ್ತಿದ್ದೇವೆ. ಆದರೆ, ಕೆಲವರು ಅಧಿಕಾರ ಕಸಿಯಲು ಹಲವು ಆಟಗಳನ್ನಾಡುವುದರಲ್ಲಿ ನಿರತರಾಗಿದ್ದಾರೆ. ಪರಿವಾರ ಸೇವೆಯಷ್ಟೇ ಅವರ ಮಂತ್ರ’ ಎಂದು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ವೇಳೆ ಸಮಾಜ ಸುಧಾರಕರಾದ ಜ್ಯೋತಿಬಾ ಫುಲೆ ಅವರ ಜಯಂತಿ ಹಿನ್ನೆಲೆಯಲ್ಲಿ ಅವರ ಕೊಡುಗೆಗಳನ್ನು ಸ್ಮರಿಸಿದರು. ‘ಮಹಿಳೆಯರ ಸಬಲೀಕರಣಕ್ಕಾಗಿ ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿ ಬಾಯಿ ಫುಲೆ ಅವರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಅಂತಹವರಿಂದ ನಾವು ಸ್ಫೂರ್ತಿ ಪಡೆದಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.