ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯನ್ನು (ಪಿಎಂಎಲ್ಎ) ಜಾರಿ ನಿರ್ದೇಶನಾಲಯವು (ಇ.ಡಿ) ವಿವೇಚನೆ ಇಲ್ಲದೆ ಬಳಸುತ್ತಿರುವುದರಿಂದ ಕಾನೂನಿನ ಮೌಲ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸುಪ್ರೀಂಕೋರ್ಟ್ ಬುಧವಾರ ಅಸಮಾಧಾನ ವ್ಯಕ್ತಪಡಿಸಿದೆ.
‘ಜನರನ್ನು ಜೈಲಿಗೆ ಕಳುಹಿಸಲು ಇದನ್ನು ಅಸ್ತ್ರವಾಗಿ ಬಳಸಲು ಆಗುವುದಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ನೇತೃತ್ವದ ಪೀಠ ಹೇಳಿತು. ಜಾರ್ಖಂಡ್ ಮೂಲದ ಹಣ ವರ್ಗಾವಣೆ ಕಂಪನಿಯೊಂದರ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಪೀಠ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿತು.
‘ಇ.ಡಿಯು ಈ ಕಾಯ್ದೆಯನ್ನೇ ದುರ್ಬಲಗೊಳಿಸುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದ ಪೀಠ, ಈ ಪ್ರಕರಣವಷ್ಟೇ ಅಲ್ಲದೆ, ₹1,000, ₹100ರ ಹಣ ವರ್ಗಾವಣೆ ಪ್ರಕರಣಗಳ ವಿರುದ್ಧವೂ ಈ ಕಾಯ್ದೆ ಬಳಸಲಾಗುತ್ತಿದೆ. ಈ ಕಾಯ್ದೆಯನ್ನು ಅಸ್ತ್ರವಾಗಿ ಬಳಸಿ, ಎಲ್ಲರನ್ನು ಕಂಬಿಯ ಹಿಂದೆ ಕಳುಹಿಸಲು ಆಗುವುದಿಲ್ಲ’ ಎಂದು ಪೀಠ ಹೇಳಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.