ತಿರುಪತಿ (ಆಂಧ್ರ ಪ್ರದೇಶ): ತಿರುಪತಿಯ ವೆಂಕಟೇಶ್ವರ ದೇವಾಲಯಕ್ಕೆ ಫೆಬ್ರುವರಿ ತಿಂಗಳಲ್ಲಿ 19 ಲಕ್ಷ ಭಕ್ತರು ಭೇಟಿ ನೀಡಿದ್ದು, ಕಾಣಿಕೆ ರೂಪದಲ್ಲಿ ₹112 ಕೋಟಿ ಸಂದಾಯವಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಶನಿವಾರ ತಿಳಿಸಿದೆ.
ಫೆಬ್ರುವರಿ ತಿಂಗಳಲ್ಲಿ 95 ಲಕ್ಷಕ್ಕೂ ಹೆಚ್ಚು ಲಡ್ಡುಗಳನ್ನು ಮಾರಲಾಗಿದೆ ಎಂದು ಟಿಟಿಡಿ ಕಾರ್ಯನಿರ್ವಹಣಾ ಅಧಿಕಾರಿ (ಇಒ) ಎ.ವಿ.ಧರ್ಮ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಿರುಮಲದಲ್ಲಿ ಲಭ್ಯವಿರುವ 7,500 ಕೊಠಡಿಗಳಲ್ಲಿ ಶೇ 85ರಷ್ಟನ್ನು ಸಾಮಾನ್ಯ ಭಕ್ತರಿಗೆ ಹಂಚಲು ನಿರ್ಧರಿಸಲಾಗಿದೆ. ಇದು ಸುಮಾರು 45,000 ಭಕ್ತರಿಗೆ ಸಾಕಾಗುತ್ತದೆ ಎಂದು ರೆಡ್ಡಿ ಹೇಳಿದ್ದಾರೆ.
ಇದಕ್ಕಿಂತ ಹೆಚ್ಚಿನ ವಸತಿ ಸೌಕರ್ಯವನ್ನು ತಿರುಮಲ್ಲದಲ್ಲಿ ಕಲ್ಪಿಸಲು ಸಾಧ್ಯವಿಲ್ಲ. ಹೀಗಾಗಿ ಉಳಿದವರು ತಿರುಪತಿಯಲ್ಲಿ ಉಳಿದುಕೊಳ್ಳುವಂತೆ ಅವರು ಭಕ್ತರಿಗೆ ಸಲಹೆ ನೀಡಿದ್ದಾರೆ.
‘ಶ್ರೀ ಪದ್ಮಾವತಿ ಮಕ್ಕಳ ಹೃದಯ ಕೇಂದ್ರ’ವು ಎರಡು ವರ್ಷಗಳಲ್ಲಿ 12 ಹೃದಯ ಕಸಿ ಮತ್ತು 2,485 ಹೃದಯ ಶಸ್ತ್ರಚಿಕಿತ್ಸೆ ಮಾಡಿದೆ ಎಂದು ಇ.ಒ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.