ಪಟ್ನಾ:ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಜೆಪಿ ಜತೆ ಮರುಮೈತ್ರಿ ಮಾಡಿಕೊಂಡ ರೀತಿ ಸೂಕ್ತವಾಗಿರಲಿಲ್ಲ. ಮೈತ್ರಿಗೂ ಮುನ್ನ ಅವರು ಚುನಾವಣೆ ಎದುರಿಸಬೇಕಿತ್ತು ಎಂದು ಜೆಡಿಯು ರಾಷ್ಟ್ರೀಯ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಸುದ್ದಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಈ ಮಾತು ಹೇಳಿದ್ದಾರೆ. ಸಂದರ್ಶನದ ವಿಡಿಯೊ ವೈರಲ್ ಆಗಿದೆ.
‘ನಿತೀಶ್ ಅವರು ಬಿಜೆಪಿ ಜತೆ ಮರುಮೈತ್ರಿ ಮಾಡಿಕೊಂಡಿದ್ದರ ಬಗ್ಗೆ ಎರಡು ರೀತಿಯ ಅಭಿಪ್ರಾಯಗಳಿವೆ. ನರೇಂದ್ರ ಮೋದಿ ಅವರಿಗೆ ನಿತೀಶ್ ಪ್ರತಿಸ್ಪರ್ಧಿ ಎಂದು ಪರಿಗಣಿಸುತ್ತಿದ್ದವರಿಗೆ ಈ ನಡೆ ತಪ್ಪಾಗಿ ಕಾಣಿಸುತ್ತಿದೆ. ಮಹಾಮೈತ್ರಿಕೂಟದ ಸರ್ಕಾರದಲ್ಲಿ ನಿತೀಶ್ ರಾಜಿ ಮಾಡಿಕೊಳ್ಳುತ್ತಿದ್ದಾರೆ ಎಂದು ಭಾವಿಸುತ್ತಿದ್ದವರು ಈ ನಡೆಯನ್ನು ಸ್ವಾಗತಿಸಿದ್ದಾರೆ’ ಎಂದು ಕಿಶೋರ್ ವಿವರಿಸಿದ್ದಾರೆ.
‘ಬಿಹಾರದ ಹಿತಾಸಕ್ತಿ ದೃಷ್ಟಿಯಿಂದ ನಿತೀಶ್ ನಡೆ ಸರಿಯಾಗಿಯೇ ಇದೆ. ಆದರೆ ಮೈತ್ರಿಕೂಟದಿಂದ ಹೊರಬಂದವರೇ ಏಕಾಏಕಿ ಬಿಜೆಪಿ ಜತೆಗೆ ಹೋಗಬಾರದಿತ್ತು. ಬದಲಿಗೆ ಚುನಾವಣೆ ಎದುರಿಸಿ ನಂತರ ಮೈತ್ರಿಗೆ ಪ್ರಯತ್ನಿಸಬೇಕಿತ್ತು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.