ಬಾಲೇಶ್ವರ (ಒಡಿಶಾ): ನೆರೆಯ ಜಾರ್ಖಂಡ್ನಲ್ಲಿ ಶನಿವಾರ ಸುರಿದ ಭಾರಿ ಮಳೆಯಿಂದಾಗಿ ಸುವರ್ಣರೇಖಾ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿತ್ತು. ಇಂದು (ಭಾನುವಾರ) ನದಿಯ ನೀರಿನ ಮಟ್ಟ ಇಳಿಕೆಯಾಗುತ್ತಿದೆ. ಆದರೂ ಕೂಡ ಬಾಲೇಶ್ವರದ 50ಕ್ಕೂ ಹೆಚ್ಚು ಗ್ರಾಮಗಳು ಜಲಾವೃತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೇ ಜಿಲ್ಲೆಯ ಬಲಿಪಾಲ್ ಬ್ಲಾಕ್ನ ಬಿಷ್ಣುಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಯುವಕನೊಬ್ಬ ಶನಿವಾರ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ ಎಂದು ವರದಿಯಾಗಿದೆ. ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಪಡೆ (ಒಡಿಆರ್ಎಎಫ್) ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಒಡಿಶಾಗೆ ತಿಳಿಸದೆ ಜಾರ್ಖಂಡ್ನ ಚಾಂಡಿಲ್ ಅಣೆಕಟ್ಟಿನ ಅಧಿಕಾರಿಗಳು ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಿದ್ದಾರೆ. ಇದರಿಂದಾಗಿ ಕನಿಷ್ಠ ನಾಲ್ಕು ಬ್ಲಾಕ್ಗಳು (ಬಲಿಯಾಪಾಲ್, ಭೋಗ್ರೈ, ಬಸ್ತಾ ಮತ್ತು ಜಲೇಶ್ವರ) ಜಲಾವೃತಗೊಂಡಿವೆ ಎಂದು ಬಾಲೇಶ್ವರ ಸಂಸದ ಪ್ರತಾಪ್ ಸಾರಂಗಿ ಆರೋಪಿಸಿದ್ದಾರೆ.
ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಿದ್ದರಿಂದ ಹಠಾತ್ ಪ್ರವಾಹ ಉಂಟಾಗಿದೆ. ಇದರಿಂದಾಗಿ ಬಾಲೇಶ್ವರ ಜಿಲ್ಲೆಯ ನಾಲ್ಕು ಬ್ಲಾಕ್ಗಳಲ್ಲಿ 50 ಸಾವಿರಕ್ಕೂ ಹೆಚ್ಚು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಸುವರ್ಣರೇಖಾ ನದಿಯ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು, ಪರಿಸ್ಥಿತಿ ಸುಧಾರಿಸುತ್ತದೆ ಎಂದು ಜಿಲ್ಲಾಡಳಿತ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.