ADVERTISEMENT

ಬೀಗ ಹಿಡಿದು ಓಡಾಡುತ್ತಿರುವ ಕಮಲ್‌ ನಾಥ್‌: ಶಿವರಾಜ್‌ ಸಿಂಗ್‌ ಚೌಹಾಣ್‌

ಪಿಟಿಐ
Published 21 ಅಕ್ಟೋಬರ್ 2023, 16:20 IST
Last Updated 21 ಅಕ್ಟೋಬರ್ 2023, 16:20 IST
ಶಿವರಾಜ್‌ ಸಿಂಗ್‌ ಚೌಹಾಣ್‌ 
ಶಿವರಾಜ್‌ ಸಿಂಗ್‌ ಚೌಹಾಣ್‌    

ಭೋಪಾಲ್‌: ‘ರಾಜ್ಯದಲ್ಲಿ ಕಲ್ಯಾಣ ಕಾರ್ಯಕ್ರಮಗಳನ್ನು ಬಂದ್‌ ಮಾಡುವ ಉದ್ದೇಶದಿಂದ ಮಧ್ಯಪ್ರದೇಶ ಕಾಂಗ್ರೆಸ್‌ ಮುಖ್ಯಸ್ಥ ಕಮಲ್‌ ನಾಥ್‌ ಅವರು ಬೀಗ ಹಿಡಿದು ಓಡಾಡುತ್ತಾರೆ’ ಎಂದು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಶನಿವಾರ  ವಾಗ್ದಾಳಿ ನಡೆಸಿದ್ದಾರೆ. 

‘ರಾಜ್ಯದಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಲು ಚೌಹಾಣ್ ಅವರು ಕಿಸೆಯಲ್ಲಿ ತೆಂಗಿನಕಾಯಿ ಹಿಡಿದು ಓಡಾಡುತ್ತಾರೆ ಎಂದು ಕಮಲ್‌ ನಾಥ್‌ ಅವರು ಮತ್ತೆ ಮತ್ತೆ ವ್ಯಂಗ್ಯವಾಡಿದ್ದರು. ಅವರನ್ನು ‘ಘೋಷಣಾ ಮಂತ್ರಿ’ ಮತ್ತು ‘ಶಿಲಾನ್ಯಾಸ ಮಂತ್ರಿ’ ಎಂದು ಕರೆದಿದ್ದರು. ಇದಕ್ಕೆ ಚೌಹಾಣ್ ಅವರು ಈ ರೀತಿ ತಿರುಗೇಟು ನೀಡಿದ್ದಾರೆ. 

2018ರ ಡಿಸೆಂಬರ್‌ನಿಂದ ಮಾರ್ಚ್‌ 2020ರವರೆಗೆ ರಾಜ್ಯದ ಮುಖ್ಯಮಂತ್ರಿ ಆಗಿದ್ದ ಕಮಲ್‌ ನಾಥ್‌ ಅವರು ಹಿಂದಿನ ಬಿಜೆಪಿ ಸರ್ಕಾರ ಜಾರಿ ಮಾಡಿದ್ದ ಹಲವು ಯೋಜನೆಗಳನ್ನು ರದ್ದುಪಡಿಸಿದ್ದರು ಎಂದು ಚೌಹಾಣ್‌ ಆರೋಪಿಸಿದ್ದಾರೆ.

ADVERTISEMENT

‘ನಾನು ಅಭಿವೃದ್ಧಿಗಾಗಿ ಮತ್ತು ಸಾರ್ವಜನಿಕರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತೇನೆ. ಅದಕ್ಕಾಗಿ ತೆಂಗಿನಕಾಯಿ ಹಿಡಿದು ಓಡಾಡುತ್ತೇನೆ. ಕಮಲ್‌ ನಾಥ್‌ ಯೋಜನೆಗಳನ್ನು ರದ್ದು ಮಾಡುತ್ತಾರೆ. ಹಾಗಾಗಿ ಬೀಗ ಹಿಡಿದುಕೊಂಡು ಓಡಾಡುತ್ತಾರೆ’ ಎಂದು ಚೌಹಾಣ್‌ ಅವರ ಕಚೇರಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಹೇಳಲಾಗಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಕಾಂಗ್ರೆಸ್‌ ಮಾಧ್ಯಮ ವಿಭಾಗದ ಮುಖ್ಯಸ್ಥ ಕೆ.ಕೆ. ಮಿಶ್ರಾ, ‘ಹೌದು, ಕಮಲ್‌ ನಾಥ್‌ ಅವರು ಬೀಗ ಹಿಡಿದು ಓಡಾಡುತ್ತಿದ್ದಾರೆ. ಆ ಬೀಗವನ್ನು ಜನರು ಬಿಜೆಪಿಗೆ ಹಾಕುತ್ತಾರೆ’ ಎಂದಿದ್ದಾರೆ.

ಬೀಳ್ಕೊಡುಗೆಗೆ ಮೊದಲು ಚೌಹಾಣ್‌ ವಿಚಲಿತರಾಗಿದ್ದಾರೆ ಮತ್ತು ಜನರ ಗಮನವನ್ನು ಪ್ರಮುಖ ವಿಷಯಗಳಿಂದ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.