ADVERTISEMENT

ಜಮ್ಮು–ಕಾಶ್ಮೀರ: ವೃತ್ತಿಪರತೆಯಿಂದ ಕಾರ್ಯಾಚರಣೆ– ಸೇನೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 20:42 IST
Last Updated 20 ಜೂನ್ 2019, 20:42 IST

ಶ್ರೀನಗರ: ‘ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವೀಯ ಮೌಲ್ಯಗಳಿಗೆ ಕುಂದು ಬಾರದಂತೆ ವೃತ್ತಿಪರತೆ ಮತ್ತು ಸಮರ್ಪಣಾ ಮನೋಭಾವದಿಂದ ಕಾರ್ಯಾಚರಣೆ ನಡೆಸುತ್ತಿದ್ದೇವೆ’ ಎಂದು ಸೇನೆ ಗುರುವಾರ ಹೇಳಿದೆ.

‘ಮಾನವೀಯ ಮೌಲ್ಯಗಳನ್ನು ಕಾಪಾಡುವ ನಿಟ್ಟಿನಲ್ಲಿ ನಮ್ಮದೇ ಆದ ನೀತಿ ಸಂಹಿತೆಯನ್ನು ಕಾಯ್ದುಕೊಂಡು ಬಂದಿದ್ದೇವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಈವರೆಗೆ ನಡೆಸಿದ ಕಾರ್ಯಾಚರಣೆಗಳು ವೃತ್ತಿಪರತೆಯಿಂದ ಕೂಡಿದ್ದು, ದೇಶಕ್ಕಾಗಿ ಸಮರ್ಪಿತವಾಗಿವೆ’ ಎಂದು ಸೇನೆಯ ಉತ್ತರ ಕಮಾಂಡ್‌ ಮುಖ್ಯಸ್ಥ ಲೆಫ್ಟಿನಂಟ್‌ ಜನರಲ್‌ ರಣಬೀರ್‌ ಸಿಂಗ್‌ ಹೇಳಿದ್ದಾರೆ.

ಅನಂತನಾಗ್‌ ಜಿಲ್ಲೆಯ ವುಜೂರ್‌ನ ಮಿಲಿಟರಿ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಯಾವುದೇ ಸಂದರ್ಭದಲ್ಲಿಯೂ ಸೂಕ್ತ ಮಟ್ಟದಲ್ಲಿಯೇ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’ ಎಂದರು.

ADVERTISEMENT

ಈ ಶಾಲೆಗೆ ಲಾನ್ಸ್‌ ನಾಯಿಕ್‌ ನಜೀರ್‌ ಅಹ್ಮದ್‌ ವಾನಿ ಅವರ ಹೆಸರನ್ನು ಮರು ನಾಮಕರಣ ಮಾಡಲಾಗಿದೆ. ವಾನಿ ಅವರಿಗೆ ಇದೇ ಜನವರಿಯಲ್ಲಿಮರಣೋತ್ತರವಾಗಿ ‘ಅಶೋಕ ಚಕ್ರ’ ಪ್ರಶಸ್ತಿ ನೀಡಿದ ನಂತರ ಮರು ನಾಮಕರಣ ಮಾಡಲಾಗಿದೆ.

‘ಈ ಶಾಲೆಯ ಹೆಸರನ್ನು ಮರು ನಾಮಕರಣ ಮಾಡುವ ಮೂಲಕ ಹುತಾತ್ಮರಾದ, ಅತ್ಯುನ್ನತ ಶೌರ್ಯ ಪ್ರಶಸ್ತಿ ಪಡೆದ ವಾನಿ ಅವರಿಗೆ ಗೌರವ ಸಲ್ಲಿಸಲು ಅರ್ಪಿಸಿದ್ದೇವೆ. ಇದು ಬಹಳ ಹೆಮ್ಮೆಯ ವಿಷಯ. ವಾನಿ ಅವರು ಈ ಹಿಂದೆಯೂ ಎರಡು ಬಾರಿ ಸೇನೆಯ ಶೌರ್ಯ ಪ್ರಶಸ್ತಿ ಪಡೆದಿದ್ದರು’ ಎಂದು ಹೇಳಿದರು.

‘ಈ ಶಾಲೆಗೆ ಮಕ್ಕಳನ್ನು ಕರೆತರಲು ಬಹಳ ಪ್ರಯತ್ನ ಪಡಬೇಕಾಯಿತು. ಯಾವುದೇ ತೊಂದರೆ ಆಗುವುದಿಲ್ಲ ಎಂಬುದನ್ನು ಪಾಲಕರಿಗೆ ಹಾಗೂ ಶಿಕ್ಷಕರಿಗೂ ಖಾತರಿ ಪಡೆಸಿದ ನಂತರ ಮಕ್ಕಳು ಶಾಲೆಗೆ ಬಂದರು. ಕಾಶ್ಮೀರದ ಮಕ್ಕಳು ನಮ್ಮ ಭವಿಷ್ಯ. ಕಠಿಣ ಪರಿಶ್ರಮದೊಂದಿಗೆ ಉತ್ತಮ ನಾಗರಿಕರಾಗಲಿದ್ದಾರೆ ಎಂಬ ವಿಶ್ವಾಸವಿದೆ’ ಎಂದು ಸಿಂಗ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.