ನವದೆಹಲಿ: ಪಾಸ್ಪೋರ್ಟ್ಗೆಅರ್ಜಿ ಸಲ್ಲಿಸಿದ್ದಲಖನೌನ ಅಂತರಧರ್ಮೀಯ ದಂಪತಿಗೆ, ದಾಖಲೆ ಪರಿಶೀಲನೆ ವೇಳೆ ಅನಗತ್ಯ ಪ್ರಶ್ನೆಗಳನ್ನು ಕೇಳಲಾಗಿತ್ತು ಎಂಬುದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನಡೆಸಿದ ಆಂತರಿಕ ತನಿಖೆಯಲ್ಲಿ ತಿಳಿದು ಬಂದಿದೆ.
‘ಅರ್ಜಿಗಳ ಪರಿಶೀಲನೆಗೆಂದು ಕಚೇರಿಗೆ ಬಂದಿದ್ದ ದಂಪತಿಗೆ ಪಾಸ್ಪೋರ್ಟ್ ಅಧಿಕಾರಿ ಕಿರುಕುಳ ನೀಡಿದ್ದಾರೆ. ಪಾಸ್ಪೋರ್ಟ್ ನೀಡಲು ಅರ್ಜಿದಾರರ ಧರ್ಮದ ಬಗ್ಗೆ ಯಾವುದೇ ವಿವರ ಅನಗತ್ಯ. ಆದರೆ ಆ ಅಧಿಕಾರಿ ಅರ್ಜಿದಾರರ ಧರ್ಮದ ಬಗ್ಗೆ ಅನಗತ್ಯ ಪ್ರಶ್ನೆಗಳನ್ನು ಕೇಳಿದ್ದಾರೆ, ಕರ್ತವ್ಯದ ನಿಯಮಗಳನ್ನು ಮೀರಿದ್ದಾರೆ. ಅವರು ತಪ್ಪೆಸಗಿರುವುದು ಆಂತರಿಕ ತನಿಖೆಯಲ್ಲಿ ಸಾಬೀತಾಗಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ.
‘ಅರ್ಜಿದಾರರ ಬಗ್ಗೆ ಪೊಲೀಸರು ಸಲ್ಲಿಸಿರುವ ಪರಿಶೀಲನಾ ವರದಿಯನ್ನೂ ತನಿಖೆಯ ಭಾಗವಾಗಿ ಪರಿಶೀಲಿಸಲಾಗಿದೆ. ಅರ್ಜಿದಾರರ ವಿಳಾಸ ಪರಿಶೀಲನೆ ವೇಳೆ ಉತ್ತರ ಪ್ರದೇಶ ಪೊಲೀಸರಿಂದಲೂ ಕರ್ತವ್ಯಲೋಪವಾಗಿದೆ. ಪರಿಶೀಲನೆ ವೇಳೆ ಅವರೂ ದಂಪತಿಗೆ ಅನಗತ್ಯ ಪ್ರಶ್ನೆಗಳನ್ನು ಕೇಳಿ ಮುಜುಗರ ಉಂಟುಮಾಡಿದ್ದಾರೆ ಎಂಬುದು ತನಿಖೆಯಲ್ಲಿ ಸಾಬೀತಾಗಿದೆ’ ಎಂದು ಮೂಲಗಳು ವಿವರಿಸಿವೆ.
ಅಧಿಕಾರಿ ಕಿರುಕುಳ ನೀಡಿದ ಬಗ್ಗೆ ದಂಪತಿ ಆರೋಪ ಮಾಡಿದ್ದರು. ಅದರ ಬೆನ್ನಲ್ಲೇ ಆ ಅಧಿಕಾರಿಯನ್ನು ಲಖನೌನಿಂದ ಗೋರಖಪುರಕ್ಕೆ ವರ್ಗಾವಣೆ ಮಾಡಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆದೇಶಿಸಿದ್ದರು. ಆನಂತರ ದಂಪತಿಗೆ ಪಾಸ್ಪೋರ್ಟ್ ನೀಡಲಾಗಿತ್ತು. ಸುಷ್ಮಾ ಅವರ ಈ ಕ್ರಮವನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.