ನವದೆಹಲಿ: 1971ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಭಾರತ ವಿಜಯ ಸಾಧಿಸಿ 50 ವರ್ಷಗಳು ತುಂಬಿದ್ದು, ಇದರ ಸ್ಮರಣಾರ್ಥವಾಗಿ ಇಲ್ಲಿನ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಸ್ವರ್ಣಿಮ್ ವಿಜಯ್ ಮಶಾಲ್’ಜ್ಯೋತಿ ಬೆಳೆಗಿಸುವ ಮೂಲಕ 50ನೇ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು.
ಪ್ರಧಾನಿ ಮೋದಿ ಅವರೊಂದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮೂರು ಪಡೆಗಳ ಮುಖ್ಯಸ್ಥರು ಸ್ಮಾರಕಕ್ಕೆ ಪುಷ್ಪ ಅರ್ಪಿಸಿ ಸೈನಿಕರಿಗೆ ಗೌರವ ಸಲ್ಲಿಸಿದರು.
50ನೇ ವರ್ಷಾಚರಣೆಯನ್ನು ವರ್ಷ ಪೂರ್ತಿ ಆಚರಿಸಲಾಗುತ್ತಿದೆ. ‘ನಾಲ್ಕು ವಿಜಯ ಜ್ಯೋತಿ‘ ದೇಶದ ವಿವಿಧ ಭಾಗಗಳಲ್ಲಿ ಸಂಚರಿಸುತ್ತದೆ. ಜತೆಗೆ, 1971ರ ಯುದ್ಧದಲ್ಲಿ ಹುತಾತ್ಮರಾಗಿ ಪರಮವೀರ ಚಕ್ರ ಮತ್ತು ಮಹಾವೀರ ಚಕ್ರ ಪುರಸ್ಕಾರ ಪಡೆದ ಯೋಧರ ಹಳ್ಳಿಗಳಿಗೂ ಜ್ಯೋತಿ ಹೋಗಲಿದೆ‘ ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
‘1971ರಲ್ಲಿ ಯುದ್ಧ ನಡೆದ ನಾಲ್ಕು ಪ್ರದೇಶಗಳು ಹಾಗೂ ಯುದ್ಧದಲ್ಲಿ ಹುತಾತ್ಮರಾಗಿ ಪ್ರಶಸ್ತಿ ಪುರಸ್ಕೃತ ಯೋಧರ ಹಳ್ಳಿಗಳ ನೆಲದ ಮಣ್ಣನ್ನು ಸಂಗ್ರಹಿಸಿ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಇಡಲಾಗುತ್ತದೆ‘ ಎಂದು ಪ್ರಕಟಣೆ ಹೇಳಿದೆ.
’ಈ ಯುದ್ಧದಲ್ಲಿ ಭಾರತ ವಿಜಯಿಯಾದ ನೆನಪಿಗಾಗಿ ಡಿಸೆಂಬರ್ 16 ಅನ್ನು ‘ವಿಜಯ್ ದಿವಾಸ್‘ ಎಂದೂ, ಇದರ 50ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ದೇಶದಾದ್ಯಂತ ಈ ವರ್ಷ ಪೂರ್ತಿ ‘ಸ್ವರ್ಣಿಮ್ ವಿಜಯ್ ವರ್ಷ (ಸುವರ್ಣ ವಿಜಯ ವರ್ಷ)‘ ಎಂದು ಆಚರಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.