ನವದೆಹಲಿ:ಲೋಕಸಭೆ ಚುನಾವಣೆ ಅಭೂತಪೂರ್ವವಾಗಿ ನಡೆದಿದ್ದು, ಮತ್ತೆ ಅಧಿಕಾರಕ್ಕೇರುವ ವಿಶ್ವಾಸವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅವರು ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
‘ನನ್ನ ಪ್ರಕಾರ, ಪೂರ್ಣ ಬಹುತಮದ ಸರ್ಕಾರ ರಚನೆಯಾಗಲಿದೆ. ಸುದೀರ್ಘ ಅವಧಿಯ ಬಳಿಕ ದೇಶದಲ್ಲಿ ಪೂರ್ಣ ಬಹುಮತದ ಸರ್ಕಾರ ರಚನೆಯಾಗುತ್ತಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಶಕ್ತಿಯನ್ನು ತೋರಿಸಿಕೊಡುವುದು ಪ್ರತಿಯೊಬ್ಬನ ಕರ್ತವ್ಯ’ ಎಂದು ಮೋದಿ ಹೇಳಿದರು.
‘ನನಗೆ ದೊರೆತ ಬೆಂಬಲದಿಂದ ಹೃದಯ ತುಂಬಿ ಬಂದಿದೆ. ನನ್ನನ್ನು ಪ್ರೀತಿಸಿದ, ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು’ ಎಂದು ಅವರು ಹೇಳಿದರು.
‘ಸರ್ಕಾರ ಸುಭದ್ರವಾಗಿದ್ದರೆ ಎಲ್ಲವೂ ಸಾಧ್ಯ’:‘ಕಳೆದ ಎರಡು ಬಾರಿಯ ಲೋಕಸಭಾ ಚುನಾವಣೆ ವೇಳೆ ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನೂ ದೇಶದಲ್ಲಿ ಆಯೋಜಿಸಿರಲಿಲ್ಲ. ಸರ್ಕಾರ ಸುಭದ್ರ, ದೃಢವಾಗಿದ್ದಾಗ ಐಪಿಎಲ್, ರಂಜಾನ್, ಶಾಲಾ ಪರೀಕ್ಷೆಗಳು ಹಾಗೂ ಇತರ ಚಟುವಟಿಕೆಗಳು ಎಲ್ಲವೂ ಸುಗಮವಾಗಿ ಮತ್ತು ಶಾಂತಿಯುತವಾಗಿ ನಡೆಯಲು ಸಾಧ್ಯ’ ಎಂದು ಮೋದಿ ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿ ಮತ್ತೆ ಸರ್ಕಾರ ರಚಿಸುವ ವಿಶ್ವಾಸ ಹೊಂದಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಹ ಭರವಸೆ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.