ನವದೆಹಲಿ: ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಜಗ್ಗೇಶ್ ಅವರು ರಾಜ್ಯಸಭೆಯಲ್ಲಿ ಸೋಮವಾರ ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸಿದರು.
ಕರ್ನಾಟಕದಿಂದ ಆಯ್ಕೆಯಾದ ನಾಲ್ವರು ಸದಸ್ಯರು ಜುಲೈ 8ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಜಗ್ಗೇಶ್ ಅವರು ಶ್ರೀ ರಾಘವೇಂದ್ರ ಸ್ವಾಮಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. ಜಗ್ಗೇಶ್ ಪ್ರಮಾಣವಚನ ಕ್ರಮಬದ್ಧವಾಗಿದೆಯಾ ಎಂಬುದನ್ನು ಪರಿಶೀಲಿಸುವಂತೆ ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರು ಅಧಿಕಾರಿಗಳಿಗೆ ಸೂಚಿಸಿದ್ದರು. ‘ಪ್ರಮಾಣವಚನ ಸ್ವೀಕರಿಸಿದ್ದು ಕ್ರಮಬದ್ಧವಾಗಿರಲಿಲ್ಲ. ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸಬೇಕು ಎಂಬುದಾಗಿ ಅಧಿಕಾರಿಗಳು ಹೇಳಿದ್ದರು’ ಎಂದು ರಾಜ್ಯಸಭೆಯ ಮೂಲಗಳು ಹೇಳಿವೆ.
ಹೀಗಾಗಿ, ಜಗ್ಗೇಶ್ ಅವರು ದೇವರ ಹೆಸರಿನಲ್ಲಿ ಕನ್ನಡದಲ್ಲಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.
ವೆಂಕಯ್ಯ ನಾಯ್ಡು ಅವರು ಜಗ್ಗೇಶ್ ಅವರ ಹೆಸರನ್ನು ಉಲ್ಲೇಖಿಸದೆಯೇ, ‘ಸದನದ ನಿಯಮಾವಳಿಗಳ ಪ್ರಕಾರವೇ ಸದಸ್ಯರು ಕಾರ್ಯನಿರ್ವಹಿಸಬೇಕು. ಪ್ರಮಾಣವಚನದ ವೇಳೆಯಲ್ಲಿ ಸಹ ನಿಯಮ ಪಾಲಿಸಬೇಕು’ ಎಂದು ಕಿವಿಮಾತು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.