ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇವಸ್ಥಾನದ ವಾರ್ಷಿಕೋತ್ಸವ ಪ್ರಯುಕ್ತ ಮಾರ್ಚ್ 11ರಿಂದ 10 ದಿನಗಳ ಕಾಲ ಭಕ್ತರ ದರ್ಶನಕ್ಕೆ ದೇವಸ್ಥಾನದ ಬಾಗಿಲು ತೆರೆಯಲಾಗುತ್ತಿದೆ.
ಪ್ರಧಾನ ಅರ್ಚಕ ಕಂದರಾರು ರಾಜೀವರು ನೇತೃತ್ವದಲ್ಲಿ ವಾರ್ಷಿಕೋತ್ಸವ ನಡೆಯಲಿದೆ. ಮಾರ್ಚ್ 21ರಂದು ಉತ್ಸವ ಸಮಾಪನವಾಗಲಿದೆ ಎಂದು ದೇವಸ್ಥಾನದ ಆಡಳಿತ ನಿರ್ವಹಿಸುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಹೇಳಿಕೆಯಲ್ಲಿ ತಿಳಿಸಿದೆ.
ದೇವಸ್ಥಾನದ ಗರ್ಭಗುಡಿಗೆ ಹೊಸದಾಗಿ ಅಳವಡಿಸಿರುವ ಚಿನ್ನ ಲೇಪಿತ ಬಾಗಿಲನ್ನು ಇದೇ ಸಂದರ್ಭ ಅನಾವರಣಗೊಳಿಸಲಾಗುತ್ತಿದೆ.
ಸಣ್ಣಪುಟ್ಟ ಬಿರುಕು ಕಾಣಿಸಿಕೊಂಡಿದ್ದ ಹಳೆಯ ಬಾಗಿಲನ್ನು ತೆರವುಗೊಳಿಸಿ, ತೇಗದ ಮರ ಬಳಸಿ ಹೊಸ ಬಾಗಿಲನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲದೆ, ಈ ಬಾಗಿಲಿಗೆ ನಾಲ್ಕು ಕೆ.ಜಿ. ಚಿನ್ನ ಮತ್ತು ತಾಮ್ರದ ಲೇಪ ಹೊದಿಸಲಾಗಿದೆ.ಉನ್ನಿ ನಂಬೂದಿರಿ ನೇತೃತ್ವದಲ್ಲಿ ಶಬರಿಮಲೆಯ ಭಕ್ತರ ಗುಂಪೊಂದು ಈ ಬಾಗಿಲಿನ ವೆಚ್ಚ ಭರಿಸಿದೆ ಎಂದು ಟಿಡಿಬಿ ಅಧ್ಯಕ್ಷ ಎ.ಪದ್ಮಕುಮಾರ್ ತಿಳಿಸಿದ್ದಾರೆ.
ಎಲ್ಲ ವಯೋಮಾನದ ಮಹಿಳೆಯರು ದೇವಸ್ಥಾನ ಪ್ರವೇಶಿಸಲು ಅನುಮತಿ ಕಲ್ಪಿಸಿ ಹಿಂದಿನ ವರ್ಷದ ಸೆಪ್ಟೆಂಬರ್ 28ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪನ್ನು ವಿರೋಧಿಸಿ ಅಯ್ಯಪ್ಪ ಭಕ್ತರು ನಡೆಸಿದ ಭಾರಿ ಪ್ರತಿಭಟನೆಗೆ ದೇವಸ್ಥಾನ ಸಾಕ್ಷಿಯಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.