ತಿರುವನಂತಪುರ (ಪಿಟಿಐ): ಕೇರಳ ರಾಜಕಾರಣದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದ್ದ ಸೌರಫಲಕ ಹಗರಣದ ಪ್ರಮುಖ ಆರೋಪಿ ಸರಿತಾ ನಾಯರ್ ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಹಗರಣಕ್ಕೆ ಸಂಬಂಧಿಸಿದ ವಿಚಾರಣೆಗೆ ಸರಿತಾ ನಾಯರ್ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಕೋಯಿಕ್ಕೋಡ್ನ ಕೋರ್ಟ್ ಬಂಧನ ವಾರಂಟ್ ಹೊರಡಿಸಿತ್ತು. ಇದರ ಬೆನ್ನಲ್ಲೇ, ಇಲ್ಲಿರುವ ಅವರ ನಿವಾಸದಲ್ಲಿ ಸರಿತಾ ಅವರನ್ನು ಬಂಧಿಸಿದ ಪೊಲೀಸರು ನಂತರ, ಕೋಯಿಕ್ಕೋಡ್ನಲ್ಲಿರುವ ಕೋರ್ಟ್ಗೆ ಹಾಜರುಪಡಿಸಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಸರಿತಾ ನಾಯರ್ ಹಾಗೂ ಬಿಜು ರಾಧಾಕೃಷ್ಣನ್ ಈ ಪ್ರಕರಣದ ಪ್ರಮುಖ ಆರೋಪಿಗಳು. ಅವರು ‘ಟೀಮ್ ಸೋಲಾರ್ ರಿನ್ಯೂಯೇಬಲ್ ಎನರ್ಜಿ ಸೊಲೂಷನ್ಸ್ ಕಂಪನಿ ಸ್ಥಾಪಿಸಿದ್ದರು. ಈ ಕಂಪನಿಯಲ್ಲಿ ಉದ್ಯೋಗ ಕೊಡಿಸುವುದಾಗಿ ಹಲವಾರು ಜನರಿಗೆ ಹಣ ಪಡೆದು ವಂಚಿಸಿದ ಆರೋಪ, ಕೆಲವರಿಗೆ ಏಜೆನ್ಸಿ ಕೊಡುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ.
2012ರಲ್ಲಿ ಕೋಯಿಕ್ಕೋಡ್ನ ಅಬ್ದುಲ್ ಮಜೀದ್ ಎಂಬುವವರು, ‘ಸೌರಫಲಕ ಮಾರಾಟದ ಏಜೆನ್ಸಿ ಕೊಡುವುದಾಗಿ ಹೇಳಿ ತನ್ನಿಂದ ₹ 42.70 ಲಕ್ಷ ಪಡೆದು ಸರಿತಾ ಹಾಗೂ ಬಿಜು ವಂಚಿಸಿದ್ದಾರೆ’ ಎಂದು ದೂರು ನೀಡಿದ್ದರು. ನಂತರ 2018ರ ಜನವರಿ 25ಕ್ಕೆ ವಿಚಾರಣೆ ಆರಂಭವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.