ADVERTISEMENT

ಕೋವಿಡ್‌: ಅನಾಥ ಮಕ್ಕಳಿಗೆ ಸೌಲಭ್ಯ, ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 16:40 IST
Last Updated 8 ಜೂನ್ 2021, 16:40 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಕೋವಿಡ್‌ನಿಂದಾಗಿ ತಂದೆ, ತಾಯಿಯನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳನ್ನು ತ್ವರಿತವಾಗಿ ಗುರುತಿಸಿ, ಅವರ ಶಿಕ್ಷಣಕ್ಕೆ ಸಹಕಾರ ಸೇರಿದಂತೆ ಪ್ರಾಥಮಿಕ ಅಗತ್ಯಗಳನ್ನು ಈಡೇರಿಸಲು ತುರ್ತು ಕ್ರಮವಹಿಸಬೇಕು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಎಲ್‌.ನಾಗೇಶ್ವರರಾವ್ ಮತ್ತು ಅನಿರುದ್ಧ ಬೋಸ್ ಅವರಿದ್ದ ನ್ಯಾಯಪೀಠವು ಈ ಸಂಬಂಧ ಕೆಲ ನಿರ್ದೇಶನಗಳನ್ನೂ ನೀಡಿತು. ವಿವಿಧ ಯೋಜನೆಗಳಡಿ ಅಗತ್ಯ ಹಣಕಾಸು ನೆರವು ಒದಗಿಸಲು ರಾಜ್ಯಗಳು ಕ್ರಮವಹಿಸಬೇಕು ಎಂದು ಆದೇಶಿಸಿದೆ.

ಅನಾಥವಾಗಿರುವ ಮಕ್ಕಳನ್ನು ತ್ವರಿತಗತಿಯಲ್ಲಿ ಸಂಪರ್ಕಿಸಲು ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾಧಿಕಾರಿ ಕಾರ್ಯಪ್ರವೃತ್ತರಾಗಬೇಕು. ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಪಡಿತರ, ಆಹಾರ, ವೈದ್ಯಕೀಯ ನೆರವು, ಬಟ್ಟೆ ಸೇರಿದಂತೆ ಎಲ್ಲ ಅಗತ್ಯಗಳನ್ನು ಈಡೇರಿಸಬೇಕು ಎಂದು ಸೂಚಿಸಿತು.

ADVERTISEMENT

ಅಮಿಕಸ್‌ ಕ್ಯೂರಿ ಗೌರವ್ ಅಗರವಾಲ್ ಅವರ ಸಲಹೆಯನ್ನು ಪರಿಗಣಿಸಿದ ನ್ಯಾಯಪೀಠವು, ಸರ್ಕಾರಿ ಶಾಲೆಗಳೇ ಅಲ್ಲದೆ ಖಾಸಗಿ ಶಾಲೆಗಳಲ್ಲಿಯೂ ಶಿಕ್ಷಣ ಮುಂದುವರಿಸಲು ಕ್ರಮವಹಿಸಬೇಕು ಎಂದು ಸಲಹೆ ಮಾಡಿತು.

ಸ್ವಯಪ್ರೇರಿತವಾಗಿ ತೆಗೆದುಕೊಂಡಿರುವ ಪ್ರಕರಣ ಕುರಿತ ಆದೇಶದಲ್ಲಿ ಮಾರ್ಚ್ 2020ರ ನಂತರ ಕೋವಿಡ್‌ ಸೋಂಕಿನಿಂದಾಗಿ ತಂದೆ–ತಾಯಿ ಕಳೆದುಕೊಂಡು ಅನಾಥವಾಗಿರುವ ಮಕ್ಕಳನ್ನು ಗುರುತಿಸಬೇಕು. ಯಾವುದೇ ವಿಳಂಬವಿಲ್ಲದೆ ಎನ್‌ಸಿಪಿಸಿಆರ್‌ ವೆಬ್‌ಸೈಟ್‌ನಲ್ಲಿ ವಿವರಗಳನ್ನು ಪ್ರಕಟಿಸಬೇಕು ಎಂದು ಸೂಚಿಸಿತು.

ಇಂತಹ ಮಕ್ಕಳನ್ನು ಗುರುತಿಸಲು ಮಕ್ಕಳ ಸಹಾಯವಾಣಿ 1098, ಆರೋಗ್ಯ ಅಧಿಕಾರಿಗಳು, ಪಂಚಾಯತ್‌ ರಾಜ್ ಸಂಸ್ಥೆಗಳು, ಪೊಲೀಸ್‌ ಇಲಾಖೆ, ಎನ್‌ಜಿಒ ಹೀಗೆ ಎಲ್ಲರ ಸಹಕಾರ ಪಡೆಯಬಹುದು ಎಂದು ತಿಳಿಸಿದರು.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್)ನ ವೆಬ್‌ನಲ್ಲಿ ಜೂನ್‌ 5, 2021ರಂದು ಇದ್ದಂತೆ 3,621 ಮಕ್ಕಳು ಅನಾಥರಾಗಿದ್ದಾರೆ. 26,176 ಮಕ್ಕಳು ತಂದೆ ಅಥವಾ ತಾಯಿ ಕಳೆದುಕೊಂಡಿದ್ದಾರೆ. 274 ಮಕ್ಕಳನ್ನು ಏಪ್ರಿಲ್ 2020ರಿಂದ ಅನಾಥವಾಗಿ ಬಿಡಲಾಗಿದೆ ಎಂಬ ಅಂಶವನ್ನು ಪೀಠ ಪರಿಗಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.