ನವದೆಹಲಿ: ಹುದ್ದೆ ನೇಮಕಾತಿಯಲ್ಲಿ ಎಲ್ಲ ವರ್ಗದಲ್ಲಿಯೂ ಕನಿಷ್ಠ ವಿದ್ಯಾರ್ಹತೆ ನಿಗದಿಪಡಿಸಿರುವ ಉತ್ತರ ಪ್ರದೇಶ ಉನ್ನತ ನ್ಯಾಯಾಂಗ ಸೇವೆಯ ನಿಯಮಗಳನ್ನು ‘ಅವಿರತ ದುಡಿಯುತ್ತಿರುವ’ ಎನ್ಜಿಒಗಳ ಆಡಳಿತ ಸಂಸ್ಥೆಗಳು ಪ್ರಶ್ನಿಸುವುದನ್ನು ತಾನು ಬಯಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸೆಪ್ಟೆಂಬರ್ 3ರ ಈ ಕುರಿತ ಆದೇಶದಲ್ಲಿ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ವಿಕ್ರಂ ನಾಥ್, ಹಿಮಾ ಕೊಹ್ಲಿ ಅವರಿದ್ದ ನ್ಯಾಯಪೀಠವು, ‘ನೊಂದ ಅಭ್ಯರ್ಥಿಗಳ ಮನವಿ ಇದ್ದರೆ ಕೇಳಬಹುದು. ಸಂವಿಧಾನದ ವಿಧಿ 136ರ ಅನ್ವಯ ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ನಾವು ಬಯಸುವುದಿಲ್ಲ. ವಜಾ ಮಾಡುತ್ತಿದ್ದೇವೆ‘ ಎಂದಿದೆ.
ಪ್ರಾಥಮಿಕ ವಿಚಾರಣೆಯಲ್ಲಿ ಎನ್ಜಿಒ ಸಂವಿಧಾನ್ ಬಚಾವ್ ಟ್ರಸ್ಟ್ ಪರವಾಗಿ ಅರ್ಜಿ ಸಲ್ಲಿಸಿದ್ದ ಹಿರಿಯ ವಕೀಲ ಅಶೋಕ್ ಕುಮಾರ್ ಶರ್ಮಾ ಅವರು, ಸಾರ್ವಜನಿಕ ಹಿತಾಸಕ್ತಿ ಅರ್ಜಿ ತಿರಸ್ಕರಿಸಿದ್ದ ಅಲಹಾಬಾದ್ ಹೈಕೋರ್ಟ್ ಆದೇಶ ಪ್ರಶ್ನಿಸಿದ್ದರು. ಸೇವಾನಿಯಮಗಳಲ್ಲಿ ಎಲ್ಲ ಸಾಮಾನ್ಯ, ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಕನಿಷ್ಠ ವಿದ್ಯಾರ್ಹತೆ ನಿಗದಿಪಡಿಸಿದ್ದು, ಮೀಸಲಾತಿ ಉದ್ದೇಶವೇ ಈಡೇರುವುದಿಲ್ಲ ಎಂದು ಪ್ರತಿಪಾದಿಸಿದ್ದರು.
ಯಾವುದಿದು ಸಂವಿಧಾನ್ ಬಚಾವೋ ಟ್ರಸ್ಟ್? ಇದೊಂದು ಎನ್ಜಿಒ. ಇಂಥ ಸಂಸ್ಥೆಗಳು ಸೇವಾ ನಿಯಮಗಳನ್ನು ಪ್ರಶ್ನಿಸಬೇಕು ಎಂದು ನಾವು ಬಯಸುವುದಿಲ್ಲ. ನೊಂದ ವಿದ್ಯಾರ್ಥಿಗಳಿದ್ದಲ್ಲಿ ಅರ್ಜಿ ಸಲ್ಲಿಸಲಿ. ಈ ವಿಷಯವನ್ನು ಕುರಿತು ಪಿಐಎಲ್ ಅನ್ನು ಬಯಸುವುದಿಲ್ಲ ಎಂದು ಪೀಠ ಹೇಳಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.