ADVERTISEMENT

ಈಶಾನ್ಯ ದೆಹಲಿ: ಬೂದಿ ಮುಚ್ಚಿದ ಕೆಂಡ

ಪಿಟಿಐ
Published 1 ಮಾರ್ಚ್ 2020, 13:11 IST
Last Updated 1 ಮಾರ್ಚ್ 2020, 13:11 IST
   

ನವದೆಹಲಿ: ಕೋಮು ಗಲಭೆಯಿಂದ ನಲುಗಿದ್ದ ಈಶಾನ್ಯ ದೆಹಲಿಯಲ್ಲಿ ಭಾನುವಾರ ಪರಿಸ್ಥಿತಿ ಶಾಂತವಾಗಿದ್ದರೂ, ಈ ಪ್ರದೇಶ ಬೂದಿ ಮುಚ್ಚಿದ ಕೆಂಡದಂತಿದೆ. ಮುಖ್ಯರಸ್ತೆಗಳಲ್ಲಿ ಬಿಗಿಪೊಲೀಸ್‌ ಬಂದೋಬಸ್ತ್‌ ನಿಯೋಜಿಸಲಾಗಿದ್ದು, ಹೆಚ್ಚಿನ ಜನರು ನಿರಾತಂಕದಿಂದ ಓಡಾಡುವ ದೃಶ್ಯ ಕಂಡುಬಂತು.

‘ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಈಶಾನ್ಯ ದೆಹಲಿ ಜಿಲ್ಲೆಯಾದ್ಯಂತ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಭಯ ಹೋಗಲಾಡಿಸಲು ಸ್ಥಳೀಯರೊಂದಿಗೆ ಮಾತುಕತೆಯನ್ನು ನಡೆಸಲಾಗುತ್ತಿದೆ. ಕಳೆದ ಮೂರು ದಿನದಲ್ಲಿ ಈ ಭಾಗದಿಂದ ಯಾವುದೇ ಹಿಂಸಾತ್ಮಕ ಘಟನೆಗಳು ವರದಿಯಾಗಿಲ್ಲ. ವದಂತಿಗಳಿಗೆ ಕಿವಿಗೊಡದೆ ಅಂಥ ಮಾಹಿತಿಯನ್ನು ಪೊಲೀಸರಿಗೆ ತಿಳಿಸಲು ಸೂಚಿಸಲಾಗಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳೊಬ್ಬರು ತಿಳಿಸಿದರು.

ಭಯದ ವಾತಾವರಣ: ‘ನಮ್ಮ ಪ್ರದೇಶದಲ್ಲಿ ಪೊಲೀಸರು ನಿಯೋಜಿಸಲ್ಪಟ್ಟಿದ್ದರೂ ಭಯದ ವಾತಾವರಣವಿದೆ. ನಾವು ಜೊತೆಯಾಗಿ ಈದ್‌, ಹೋಲಿ, ದೀಪಾವಳಿ ಆಚರಿಸಿದ್ದೆವು. ಆದರೆ ಇಂಥ ಘಟನೆಯನ್ನು ಎದುರಿಸಿರಲಿಲ್ಲ. ಹಿಂಸಾಚಾರದಲ್ಲಿ ತೊಡಗಿದ್ದವರು ಯಾರೂ ಈ ಪ್ರದೇಶದವರು ಅಲ್ಲ, ಅವರೆಲ್ಲ ಹೊರಗಿನಿಂದ ಬಂದವರು. ಶಿವ ವಿಹಾರದಲ್ಲಿ ನನ್ನ ಗಾರ್ಮೆಂಟ್‌ ಮಳಿಗೆಯಿದ್ದು, ಗಲಭೆ ಸಂದರ್ಭದಲ್ಲಿ ಸ್ಥಳೀಯ ಹಿಂದೂಗಳು ನನ್ನನ್ನು ರಕ್ಷಣೆ ಮಾಡಿದರು’ಎಂದು ಮೊಹಮ್ಮದ್‌ ಯೂನಸ್‌ ಹೇಳಿದರು.

ADVERTISEMENT

₹10 ಲಕ್ಷ ಪರಿಹಾರ: ಗಲಭೆಯಲ್ಲಿ ಮನೆ ಕಳೆದುಕೊಂಡ ಬಿಎಸ್‌ಎಫ್‌ ಕಾನ್‌ಸ್ಟೆಬಲ್‌ ಮೊಹಮ್ಮದ್‌ ಅನೀಸ್‌ಗೆ ₹10 ಲಕ್ಷ ಪರಿಹಾರವನ್ನು ಭಾನುವಾರ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಬಿಡುಗಡೆಗೊಳಿಸಿದ್ದಾರೆ. ಗಲಭೆ ವೇಳೆ ದುಷ್ಕರ್ಮಿಗಳು ಅನೀಸ್‌ ಅವರ ಮನೆಗೆ ಬೆಂಕಿ ಇಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.