ಗೋರಖ್ಪುರ: ‘ಆರೋಪಿಯಿಂದ ₹50,000 ತೆಗೆದುಕೊಂಡು ಆತನಿಗೆ ಬೂಟಿನಿಂದ ಐದು ಬಾರಿ ಹೊಡೆದು ಪ್ರಕರಣವನ್ನು ಮುಕ್ತಾಯಗೊಳಿಸಿ’. ಅತ್ಯಾಚಾರ ಸಂತ್ರಸ್ತೆಗೆ ಉತ್ತರ ಪ್ರದೇಶದ ಮಹಾರಾಜ್ಗಂಜ್ ಜಿಲ್ಲೆಯ ಗ್ರಾಮ ಪಂಚಾಯಿತಿಯೊಂದು ನೀಡಿದ ಸಲಹೆ ಇದು!
ಇದಕ್ಕೊಪ್ಪದ ಸಂತ್ರಸ್ತೆಯ ಕುಟುಂಬದವರೀಗ ಪೊಲೀಸರಿಗೆ ದೂರು ನೀಡಿದ್ದಾರೆ.
ಸಂತ್ರಸ್ತೆಯು ಮಹಾರಾಜ್ಗಂಜ್ ಜಿಲ್ಲೆಯ ಕೋತಿಭರ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾಗಿದ್ದು, ಅತ್ಯಾಚಾರ ನಡೆದ ಬಗ್ಗೆ ಅವರ ತಾಯಿಯು ಗ್ರಾಮ ಪಂಚಾಯಿತಿಗೆ ಜೂನ್ 23ರಂದು ದೂರು ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪಂಚಾಯಿತಿಯು ಆರೋಪಿಯಿಂದ ಹಣ ಪಡೆದು ಅಧಿಕಾರಿಗಳ ಎದುರಿನಲ್ಲೇ ಬೂಟಿನಿಂದ ಹೊಡೆದು ಪ್ರಕರಣ ಮುಕ್ತಾಯಗೊಳಿಸುವಂತೆ ಹೇಳಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೂನ್ 25ರಂದು ಸಂತ್ರಸ್ತೆಯ ಕುಟುಂಬದವರು ಕೋತಿಭರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅತ್ಯಾಚಾರ ಸಂತ್ರಸ್ತೆಗೆ ಪಂಚಾಯಿತಿ ಸಲಹೆ ನೀಡಿರುವ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿಯೂ ವೈರಲ್ ಆಗಿತ್ತು.
ಸಂತ್ರಸ್ತೆಯ ವೈದ್ಯಕೀಯ ತಪಾಸಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳುವಂತೆ ಮಹಾರಾಜ್ಗಂಜ್ ಎಸ್ಪಿ ಪ್ರದೀಪ್ ಗುಪ್ತಾ ಸೂಚಿಸಿದ್ದಾರೆ.
‘ಅತ್ಯಾಚಾರ ನಡೆದಿರುವುದು ವೈದ್ಯಕೀಯ ಪರೀಕ್ಷೆಗಳಲ್ಲಿ ಸಾಬೀತಾದರೆ ಕಾನೂನಿನ ಅಡಿ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.