ADVERTISEMENT

₹50 ಸಾವಿರ ಪಡೆದು ಆರೋಪಿಗೆ ಹೊಡೆಯಿರಿ: ಅತ್ಯಾಚಾರ ಸಂತ್ರಸ್ತೆಗೆ ಪಂಚಾಯಿತಿ ಸಲಹೆ

ಪಿಟಿಐ
Published 30 ಜೂನ್ 2021, 6:36 IST
Last Updated 30 ಜೂನ್ 2021, 6:36 IST
ಸಾಂದರ್ಭಿಕ ಚಿತ್ರ (ಪ್ರಜಾವಾಣಿ ಸಂಗ್ರಹ)
ಸಾಂದರ್ಭಿಕ ಚಿತ್ರ (ಪ್ರಜಾವಾಣಿ ಸಂಗ್ರಹ)   

ಗೋರಖ್‌ಪುರ: ‘ಆರೋಪಿಯಿಂದ ₹50,000 ತೆಗೆದುಕೊಂಡು ಆತನಿಗೆ ಬೂಟಿನಿಂದ ಐದು ಬಾರಿ ಹೊಡೆದು ಪ್ರಕರಣವನ್ನು ಮುಕ್ತಾಯಗೊಳಿಸಿ’. ಅತ್ಯಾಚಾರ ಸಂತ್ರಸ್ತೆಗೆ ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ಗ್ರಾಮ ಪಂಚಾಯಿತಿಯೊಂದು ನೀಡಿದ ಸಲಹೆ ಇದು!

ಇದಕ್ಕೊಪ್ಪದ ಸಂತ್ರಸ್ತೆಯ ಕುಟುಂಬದವರೀಗ ಪೊಲೀಸರಿಗೆ ದೂರು ನೀಡಿದ್ದಾರೆ.

ಸಂತ್ರಸ್ತೆಯು ಮಹಾರಾಜ್‌ಗಂಜ್ ಜಿಲ್ಲೆಯ ಕೋತಿಭರ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾಗಿದ್ದು, ಅತ್ಯಾಚಾರ ನಡೆದ ಬಗ್ಗೆ ಅವರ ತಾಯಿಯು ಗ್ರಾಮ ಪಂಚಾಯಿತಿಗೆ ಜೂನ್ 23ರಂದು ದೂರು ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪಂಚಾಯಿತಿಯು ಆರೋಪಿಯಿಂದ ಹಣ ಪಡೆದು ಅಧಿಕಾರಿಗಳ ಎದುರಿನಲ್ಲೇ ಬೂಟಿನಿಂದ ಹೊಡೆದು ಪ್ರಕರಣ ಮುಕ್ತಾಯಗೊಳಿಸುವಂತೆ ಹೇಳಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಜೂನ್ 25ರಂದು ಸಂತ್ರಸ್ತೆಯ ಕುಟುಂಬದವರು ಕೋತಿಭರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಅತ್ಯಾಚಾರ ಸಂತ್ರಸ್ತೆಗೆ ಪಂಚಾಯಿತಿ ಸಲಹೆ ನೀಡಿರುವ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿಯೂ ವೈರಲ್ ಆಗಿತ್ತು.

ಸಂತ್ರಸ್ತೆಯ ವೈದ್ಯಕೀಯ ತಪಾಸಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳುವಂತೆ ಮಹಾರಾಜ್‌ಗಂಜ್ ಎಸ್‌ಪಿ ಪ್ರದೀಪ್‌ ಗುಪ್ತಾ ಸೂಚಿಸಿದ್ದಾರೆ.

‘ಅತ್ಯಾಚಾರ ನಡೆದಿರುವುದು ವೈದ್ಯಕೀಯ ಪರೀಕ್ಷೆಗಳಲ್ಲಿ ಸಾಬೀತಾದರೆ ಕಾನೂನಿನ ಅಡಿ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.