ಚೆನ್ನೈ: ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ದಲಿತ ಸಮುದಾಯದ ವ್ಯಕ್ತಿಯೊಬ್ಬರ ಮೃತದೇಹವನ್ನು 20 ಅಡಿ ಎತ್ತರದ ಸೇತುವೆಯಿಂದ ಹಗ್ಗದ ಮೂಲಕ ಕೆಳಕ್ಕೆ ಇಳಿಸಿ ಅಂತ್ಯಸಂಸ್ಕಾರಕ್ಕಾಗಿ ತೆಗೆದುಕೊಂಡು ಹೋದ ವಿಡಿಯೊ ವೈರಲ್ ಆಗಿದೆ.
55 ವರ್ಷ ವಯಸ್ಸಿನ ಕುಪ್ಪನ್ ಅಪಘಾತವೊಂದರಲ್ಲಿ ಆ. 16 ರಂದು ಮೃತಪಟ್ಟಿದ್ದರು. ಅವರ ಮೃತದೇಹವನ್ನು ಮೇಲ್ಜಾತಿ ಜನರ ಹೊಲಗಳ ಮೂಲಕ ತೆಗೆದುಕೊಂಡು ಹೋಗಲು ಅವಕಾಶ ಇರಲಿಲ್ಲ. ಹಾಗಾಗಿ ಸೇತುವೆಯಿಂದ ಕೆಳಕ್ಕೆ ಇಳಿಸಿ ನದಿ ಮೂಲಕ ಒಯ್ಯಬೇಕಾಯಿತು. ಈ ಪ್ರಕರಣ ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದೆ. ಪ್ರಕರಣಕ್ಕೆ ಜಾತಿ ತಾರತಮ್ಯದ ಆಯಾಮ ಇಲ್ಲ ಎಂದು ವೆಲ್ಲೂರು ಜಿಲ್ಲಾಡಳಿತ ಹೇಳಿದೆ. ಆದರೆ, ದಲಿತರ ಸ್ಮಶಾನಕ್ಕಾಗಿ ಅರ್ಧ ಎಕರೆ ಸ್ಥಳ ಮಂಜೂರು ಮಾಡಿದೆ.
‘ಯಾರಾದರೂ ಸತ್ತಾಗ, ಸೇತುವೆ ಮಧ್ಯಭಾಗದಲ್ಲಿ ದೇಹ ಕೆಳಕ್ಕೆ ಇಳಿಸಿ ಸಾಗಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ’ ಎಂದು ಮೃತನ ಸಂಬಂಧಿ ವಿಜಯ್ ಹೇಳಿದ್ದಾರೆ.
*
ಸಮಾಜದ ಕೆಲವು ವರ್ಗಗಳ ವಿರುದ್ಧದ ದೌರ್ಜನ್ಯ ಹೆಚ್ಚಳಕ್ಕೆ ಸರ್ಕಾರವು ನಿಷ್ಕ್ರಿಯವಾಗಿರುವುದೇ ಕಾರಣ. ತಪ್ಪಿತಸ್ಥರ ವಿರುದ್ಧ ಎಸ್ಸಿ/ಎಸ್ಟಿ ಕಾಯ್ದೆ ಅಡಿ ಕ್ರಮ ಕೈಗೊಳ್ಳಬೇಕು.
–ಡಿ. ರವಿಕುಮಾರ್, ವಿಲ್ಲುಪುರಂ ಸಂಸದ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.