ಪಟ್ನಾ: ಮುಸ್ಲಿಮರನ್ನು ಉದ್ದೇಶಿಸಿ ಮಾತನಾಡುತ್ತಾ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ನವಜೋತ್ಸಿಂಗ್ ಸಿಧು ಅವರನ್ನು ಅವರ ಪಕ್ಷದ ಮುಖಂಡ, ಕಟಿಹಾರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ತಾರೀಖ್ ಅನ್ವರ್ ಟೀಕಿಸಿದ್ದಾರೆ.
ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದ ಹಿರಿಯ ಸಂಸದ ಅನ್ವರ್, ‘ಇಂಥ ಮಾತು ಯಾರಿಗೂ ಶೋಭೆ ತರುವುದಿಲ್ಲ. ಆ ವೇದಿಕೆಯಲ್ಲಿ ನಾನು ಇದ್ದಿದ್ದರೆ ಅಂಥ ಒಡಕಿನ ಮಾತುಗಳನ್ನು ಆಡಲು ಬಿಡುತ್ತಿರಲಿಲ್ಲ. ಕಾಂಗ್ರೆಸ್ ಯಾವತ್ತೂ ಹಿಂದೂ–ಮುಸ್ಲಿಂ ಎಂಬ ಭೇದಭಾವ ಮಾಡುವುದಿಲ್ಲ. ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ನಾನೆಂದೂ ಚುನಾವಣೆಯಲ್ಲಿ ಗೆಲ್ಲಲು ಜನರ ಧಾರ್ಮಿಕ ಭಾವನೆಗಳನ್ನು ಬಳಸಿಕೊಂಡಿಲ್ಲ. ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಿ ಚುನಾವಣೆ ಗೆಲ್ಲುವುದಕ್ಕಿಂತಲೂ ಸೋಲುವುದನ್ನೇ ನಾನು ಇಷ್ಟಪಡುವೆ’ ಎಂದು ತಾರೀಖ್ ಅನ್ವರ್ ಹೇಳಿದ್ದಾರೆ.
ತಾರೀಖ್ ಅವರ ಪರವಾಗಿ ಕಟಿಹಾರ್ನಲ್ಲಿ ಆಯೋಜಿಸಿದ್ದ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ಸಿಧು, ‘ಈ ಕ್ಷೇತ್ರದಲ್ಲಿ ಶೇ 64ರಷ್ಟಿರುವ ಮುಸ್ಲಿಮರೇ ಬಹುಸಂಖ್ಯಾತರಾಗಿದ್ದು ಎಲ್ಲರೂ ಒಗ್ಗಟ್ಟಾಗಿ ಮೋದಿಯನ್ನು ಸಿಕ್ಸರ್ಗೆ ಹೊಡೆಯಬೇಕು’ ಎಂದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.