ADVERTISEMENT

ರಾಜಸ್ಥಾನ: ಗೋಡೆ ಕೊರೆದು, ಹೊದಿಕೆಯನ್ನೇ ಹಗ್ಗವಾಗಿಸಿ ಜೈಲಿಂದ ಆರೋಪಿಗಳು ಪರಾರಿ

ಪಿಟಿಐ
Published 9 ಜೂನ್ 2022, 11:03 IST
Last Updated 9 ಜೂನ್ 2022, 11:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜೈಪುರ: ಗೋಡೆಯನ್ನು ಕೊರೆದು, ಹೊದಿಕೆಯನ್ನೇ ಹಗ್ಗವಾಗಿ ಮಾಡಿಕೊಂಡು ಮೂವರು ವಿಚಾರಣಾದೀನ ಕೈದಿಗಳು 12 ಅಡಿ ಕೆಳಗೆ ಜಿಗಿದು ಪರಾರಿಯಾದ ಘಟನೆ ರಾಜಸ್ಥಾನದ ಬಾಂಸವಾಢ ಜಿಲ್ಲಾ ಜೈಲಿನಲ್ಲಿ ನಡೆದಿದೆ.

ಪ್ರತ್ಯೇಕ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದ ಮೂವರು ವಿಚಾರಣಾದೀನ ಕೈದಿಗಳು ಗುರುವಾರ ನಸುಕಿನ ವೇಳೆ ಪರಾರಿಯಾಗಿದ್ದಾರೆ.

ಆರೋಪಿಗಳು ತಟ್ಟೆಗಳ ಸಹಾಯದಿಂದ ಜೈಲಿನ ಕೊಠಡಿಯ ಕಿಟಕಿಯ ಕೆಳಗಿರುವ ಕೆಲವು ಕಲ್ಲುಗಳನ್ನು ಸಡಿಲಗೊಳಿಸಿದ್ದಾರೆ. ಅಲ್ಲಿಂದ ಸುಮಾರು 12 ಅಡಿ ಗೋಡೆಯನ್ನು ಹಾರಿದ್ದಾರೆ. ನಂತರ ಹೊದಿಕೆಯನ್ನು ಹಗ್ಗದಂತೆ ಮಾಡಿಕೊಂಡು ಹೊರಗಿನ 20 ಅಡಿ ಗೋಡೆಯನ್ನು ದಾಟಿ ಪರಾರಿಯಾಗಿದ್ದಾರೆ ಎಂದು ಜೈಲರ್‌ ಮಾನ್‌ ಸಿಂಗ್‌ ತಿಳಿಸಿದ್ದಾರೆ.

ADVERTISEMENT

ನಸುಕಿನ ಜಾವ ಸುಮಾರು 2 ಗಂಟೆಯಿಂದ 3 ಗಂಟೆಯ ನಡುವೆ ಈ ಪಲಾಯನ ಕೃತ್ಯ ನಡೆದಿದೆ. ಆರೋಪಿಗಳು ಗೋಡೆ ಕೊರೆದು ತಪ್ಪಿಸಿಕೊಂಡಿರುವ ವಿಚಾರ ಬೆಳಿಗ್ಗೆ 5 ಗಂಟೆಗೆ ಗೊತ್ತಾಗಿದೆ. ತಕ್ಷಣ ಸ್ಥಳೀಯ ಪೊಲೀಸರಿಗೆ ತಿಳಿಸಲಾಗಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆದಿದೆ ಎಂದು ಮಾನ್‌ ಸಿಂಗ್‌ ವಿವರಿಸಿದ್ದಾರೆ.

ಪರಮೇಶ್‌ (22), ಕಮಲೇಶ್‌ (20) ಮತ್ತು ಪ್ರವೀಣ್‌ (19) ಜೈಲಿನಿಂದ ತಪ್ಪಿಸಿಕೊಂಡಿರುವ ಆರೋಪಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.