ಕೋಯಿಕ್ಕೋಡ್,ಕೇರಳ:ಮಂಗಳೂರಿಗೆ ಬರುತ್ತಿದ್ದ ಎರಡು ಪ್ರತ್ಯೇಕ ರೈಲುಗಳಲ್ಲಿ ಶನಿವಾರ ಬೆಳಗ್ಗೆ ಕಳ್ಳತನ ನಡೆದಿದ್ದು ಪ್ರಯಾಣಿಕರ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಲಾಗಿದೆ.
ಚೆನ್ನೈ–ಮಂಗಳೂರು ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ಮತ್ತು ತಿರುವನಂತಪುರ– ಮಂಗಳೂರು ಮಲಬಾರ್ ಎಕ್ಸ್ಪ್ರೆಸ್ ರೈಲುಗಳ ಹವಾನಿಯಂತ್ರಿತ ಬೋಗಿಗಳಲ್ಲಿ ಕಳ್ಳತನ ನಡೆದಿದೆ ಎಂದುರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಚೆನ್ನೈ–ಮಂಗಳೂರು ಸೂಪರ್ ಫಾಸ್ಟ್ ರೈಲಿನಲ್ಲಿ ತಿರುಪುರ್ ಮತ್ತು ತಿರೂರ್ ಮಧ್ಯೆ ಕಳ್ಳತನ ನಡೆದಿದೆ.ಕಣ್ಣೂರಿನಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಚೆನ್ನೈ–ಮಂಗಳೂರು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪೊನ್ನಿಮಾರನ್ ಎಂಬ ಮಹಿಳೆಯ ಬ್ಯಾಗ್ನಲ್ಲಿದ್ದ ₹15 ಲಕ್ಷ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳು ಹಾಗೂ ₹22 ಸಾವಿರ ನಗದನ್ನು ಕಳ್ಳತನ ಮಾಡಲಾಗಿದೆ.
‘ಸಿಂಗಪುರದಿಂದ ತಿರುವನಂತಪುರದ ನೆಡುಂಬಾಶ್ಶೇರಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮೂವರು ಸದಸ್ಯರಿದ್ದ ಕುಟುಂಬವೊಂದು ಮಲಬಾರ್ ಎಕ್ಸ್ಪ್ರೆಸ್ನಲ್ಲಿ ಕಣ್ಣೂರು ಬಳಿಯ ಪಯ್ಯನ್ನೂರಿಗೆ ಪ್ರಯಾಣಿಸುತ್ತಿತ್ತು. ಇವರ ಬಳಿಯಿದ್ದ 72 ಗ್ರಾಂ ಚಿನ್ನವನ್ನು ಕಳ್ಳರು ದೋಚಿದ್ದಾರೆ’ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ರೈಲ್ವೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.