ADVERTISEMENT

ಪಂಚರಾಜ್ಯಗಳ ಚುನಾವಣಾ ಕಣದಲ್ಲಿ- ಅಖಿಲೇಶ್‌ ವಿರುದ್ಧ ಎಸ್‌ಸಿ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2022, 19:31 IST
Last Updated 27 ಜನವರಿ 2022, 19:31 IST

*ಅಖಿಲೇಶ್‌ ವಿರುದ್ಧ ಎಸ್‌ಸಿ ಅಭ್ಯರ್ಥಿ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರು ಸ್ಪರ್ಧಿಸುತ್ತಿರುವ ಕರ್ಹಾಲ್‌ ಕ್ಷೇತ್ರದಿಂದ ಬಿಎಸ್‌ಪಿ ಅಭ್ಯರ್ಥಿಯಾಗಿ ಪರಿಶಿಷ್ಟ ಜಾತಿಯ ಕುಲದೀಪ್‌ ನಾರಾಯಣ್‌ ಅವರನ್ನು ಕಣಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಅಖಿಲೇಶ್‌ ಚಿಕ್ಕಪ್ಪ ಶಿವಪಾಲ್ ಯಾದವ್‌ ಅವರ ವಿರುದ್ಧವೂ ಎಸ್‌.ಸಿ ಅಭ್ಯರ್ಥಿಯೇ ಕಣಕ್ಕೆ ಇಳಿಯಲಿದ್ದಾರೆ ಎಂದು ಬಿಎಸ್‌ಪಿ ತಿಳಿಸಿದೆ. ಮೂರನೇ ಹಂತದಲ್ಲಿ ಮತದಾನ ನಡೆಯಲಿರುವ 51 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪಕ್ಷವು ಪ್ರಕಟಿಸಿದೆ

*ಇಂದಿನಿಂದ ಪ್ರಚಾರಕ್ಕೆ ಅವಕಾಶ: ಮೊದಲ ಹಂತದಲ್ಲಿ ಮತದಾ ನಡೆಯಲಿರುವ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ್ತು ಪಕ್ಷಗಳು ಶುಕ್ರವಾರದಿಂದ ಬಹಿರಂಗ ಪ್ರಚಾರ ನಡೆಸಬಹುದಾಗಿದೆ. ಆದರೆ, ಸಾರ್ವಜನಿಕ ಸಮಾರಂಭದಲ್ಲಿ 500ಕ್ಕಿಂತ ಹೆಚ್ಚು ಜನರು ಇರುವಂತಿಲ್ಲ. ಭೌತಿಕ ರ‍್ಯಾಲಿ ಮತ್ತು ರೋಡ್‌ಷೋಗಳಿಗೆ ಇದೇ 31ರವರೆಗೆ ಆಯೋಗವು ನಿಷೇಧ ಹೇರಿತ್ತು. ಆದರೆ, ಮೊದಲ ಎರಡು ಹಂತಗಳಲ್ಲಿ ಮತದಾನ ನಡೆಯಲಿರುವ ಇದೇ 22ರಂದು ವಿನಾಯಿತಿ ಘೋಷಿಸಿತ್ತು. ಅದರ ಪ್ರಕಾರ, ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಜ.28ರಿಂದ ಷರತ್ತಿನ ಅನ್ವಯ ಬಹಿರಂಗ ಪ್ರಚಾರ ನಡೆಸಬಹುದಾಗಿದೆ

*ಕಾಂಗ್ರೆಸ್ಸಿಗರಿಗೆ ಬಿಜೆಪಿ ಟಿಕೆಟ್: ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಇಬ್ಬರು ಶಾಸಕರಿಗೆ ಬಿಜೆಪಿ ಟಿಕೆಟ್‌ ನೀಡಿದೆ. ಶಾಸಕರಾದ ಫತೇಹ್‌ಜಂಗ್‌ ಸಿಂಗ್‌ ಬಾಜ್ವಾ ಮತ್ತು ಹರ್ಜೋತ್‌ ಕಮಲ್‌ ಅವರಿಗೆ ಬಿಜೆಪಿ ಟಿಕೆಟ್‌ ಕೊಟ್ಟಿದೆ. ಇವರು ಕಾಂಗ್ರೆಸ್‌ ತೊರೆದು ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದರು. ಹರ್ಜೋತ್‌ ಅವರು ಮೊಗಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಬಾಲಿವುಡ್‌ ನಟ ಸೋನು ಸೂದ್ ಅವರ ತಂಗಿ ಮಾಳವಿಕಾ ಸೂದ್‌ ಅವರಿಗೆ ಈ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಹಾಗಾಗಿ, ಹರ್ಜೋತ್‌ ಅವರು ಬಿಜೆಪಿ ಸೇರಿದ್ದಾರೆ

ADVERTISEMENT

ಆಧಾರ: ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.