ಕೋಲ್ಕತ್ತ: ಟಿಪ್ಪು ಸುಲ್ತಾನ್ ವಿರುದ್ಧ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ಇಲ್ಲಿರುವ ಟಿಪ್ಪು ವಂಶಸ್ಥರು, ಸಚಿವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ.
ಟಿಪ್ಪು ಮಗ ಮೂನಿರುದ್ದಿನ್ ಅವರ ಆರನೇ ತಲೆಮಾರಿಗೆ ಸೇರಿರುವ ಬಕ್ತಿಯಾರ್ ಅಲಿ ಮಾತನಾಡಿ,‘ಟಿಪ್ಪು ವಿರುದ್ಧ ಹೆಗಡೆ ಅವರು ಮಾಡಿರುವ ಹೇಳಿಕೆಗಳು ಆಧಾರರಹಿತ’ ಎಂದು ದೂರಿದ್ದಾರೆ.
‘ಇಂತಹ ಅವಹೇಳನಕಾರಿ ಹೇಳಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ. ರಾಜಕೀಯ ದುರುದ್ದೇಶದಿಂದ ಅವರು ಟಿಪ್ಪು ವಿರುದ್ಧ ಇಷ್ಟು ಹೀನ ಮಟ್ಟದಲ್ಲಿ ಟೀಕಿಸುತ್ತಿದ್ದಾರೆ. ಈ ಕುರಿತು ಕಾನೂನು ಕ್ರಮ ಜರುಗಿಸಲು ವಕೀಲರೊಂದಿಗೆ ನಾವು ಚರ್ಚೆ ನಡೆಸಿದ್ದೇವೆ. ಸಚಿವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆಯೂ ಚಿಂತನೆ ನಡೆಸಿದ್ದೇವೆ’ ಎಂದು ಬಕ್ತಿಯಾರ್ ಅಲಿ ತಿಳಿಸಿದ್ದಾರೆ.
ಹೆಗಡೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುವ ಸಾಧ್ಯತೆ ತಳ್ಳಿಹಾಕಿರುವ ಅವರು, ಅಂತಹ ಯಾವುದೇ ಚಿಂತನೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಟಿಪ್ಪು ಜಯಂತಿ ಆಚರಣೆಯ ಆಮಂತ್ರಣ ಪತ್ರಿಕೆಯಲ್ಲಿ ಕರ್ನಾಟಕ ಸರ್ಕಾರ ತಮ್ಮ ಹೆಸರು ಹಾಕಬಾರದು ಎಂದು ಅನಂತಕುಮಾರ್ ಹೆಗಡೆ ಅವರು ಅಕ್ಟೋಬರ್ 21ರಂದು ಟ್ವೀಟ್ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.