ಬೆಂಗಳೂರು: ‘ಬ್ಯಾಂಕ್ ಖಾತೆದಾರರನ್ನು ಬಿಟ್ಟು, ಅನ್ಯ ವ್ಯಕ್ತಿಗಳು ಡೆಬಿಟ್ ಕಾರ್ಡ್ ಬಳಸುವಂತಿಲ್ಲ’ ಎಂದು ಬೆಂಗಳೂರು ನಗರ ಜಿಲ್ಲೆಯ ನಾಲ್ಕನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶಿಸಿದೆ.
ಈ ಕುರಿತಂತೆ ಮಾರತ್ಹಳ್ಳಿಯ ನಿವಾಸಿ ವಂದನಾ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ವೇದಿಕೆ, ‘ಖಾತೆದಾರರಲ್ಲದವರು ಮತ್ತೊಬ್ಬರ ಬಳಿ, ಹಣ ಡ್ರಾ ಮಾಡಿಸಿಕೊಳ್ಳುವಂತಿಲ್ಲ’ ಎಂದು ಹೇಳಿ ಅರ್ಜಿ ವಜಾ ಮಾಡಿದೆ.
ಪ್ರಕರಣವೇನು?: 2013ರಲ್ಲಿ ಹೆರಿಗೆ ರಜೆಯಲ್ಲಿದ್ದ ವಂದನಾ ತಮ್ಮ ಡೆಬಿಟ್ ಕಾರ್ಡ್ ಅನ್ನು ಪತಿ ರಾಜೇಶ್ಗೆ ನೀಡಿ ಎಟಿಎಂನಿಂದ ಹಣ ತರುವಂತೆ ಹೇಳಿದ್ದರು. ಪತಿ, ಎಸ್ಬಿಐ ಎಟಿಎಂ ಕೇಂದ್ರದಲ್ಲಿ ಕಾರ್ಡ್ ಸ್ವೈಪ್ ಮಾಡಿದ್ದರು. ಇದಕ್ಕೆ ₹25 ಸಾವಿರ ಡೆಬಿಟ್ ಆಗಿದೆ ಎಂದು ರಶೀದಿ ಬಂದಿತ್ತು. ಆದರೆ, ಹಣ ಬಂದಿರಲಿಲ್ಲ.
ಬ್ಯಾಂಕ್ ಅಧಿಕಾರಿಗಳಿಗೆ ಕರೆ ಮಾಡಿದ್ದ ರಾಜೇಶ್, ಈ ಬಗ್ಗೆ ವಿಚಾರಿಸಿದ್ದರು. ಇದಕ್ಕೆ ಅಧಿಕಾರಿಗಳು, ‘ಎಟಿಎಂ ಸಮಸ್ಯೆಯಿದ್ದು, 24 ಗಂಟೆಯೊಳಗೆ ಹಣ ಖಾತೆಗೆ ಮರುಪಾವತಿ ಆಗಲಿದೆ’ ಎಂದಿದ್ದರು. ‘24 ಗಂಟೆ ಕಳೆದರೂ ಹಣ ಜಮಾ ಆಗಿಲ್ಲ’ ಎಂದು ದೂರು ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.