ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಹಿಂದೂ ಧರ್ಮದವರೋ ಜೈನ ಧರ್ಮದವರೋ? ಅವರು ಯಾವ ಧರ್ಮಕ್ಕೆ ಸೇರಿದವರು ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅಮಿತ್ ಶಾ ಅವರು ಸಿದ್ದರಾಮಯ್ಯ ಅವರನ್ನು ಅಹಿಂದು (anti-Hindu -ಹಿಂದೂ ವಿರೋಧಿ) ಎಂದು ಕರೆದಿದ್ದರು. ಇದಕ್ಕೆ ಸಿದ್ದರಾಮಯ್ಯ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಎರಡು ದಿನಗಳ ಹಿಂದೆ ದಾವಣಗೆರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ಮಾಡಿದ ಅಮಿತ್ ಶಾ, ಸಿದ್ದರಾಮಯ್ಯ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ನಾಯಕರಲ್ಲ. ಅವರೊಬ್ಬ ಹಿಂದೂ ವಿರೋಧಿ ನಾಯಕ ಎಂದಿದ್ದರು.
ಈ ಟೀಕೆಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅಮಿತ್ ಶಾ ಅವರು ಹಿಂದುವೋ ಅಲ್ಲವೋ ಎಂಬುದನ್ನು ಹೇಳಲಿ.ಅಮಿತ್ ಶಾ ಅವರು ಜೈನರು. ಅವರು ಅಹಿಂದುವೋ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ. ಜೈನ್ ಎಂಬುದು ಪ್ರತ್ಯೇಕ ಧರ್ಮ, ಅವರು ನನ್ನ ಬಗ್ಗೆ ಮಾತನಾಡುವುದೇನಿದೆ? ಶಾ ಅವರು ನನಗೆ ಹೆದರುತ್ತಾರೆ, ಹಾಗಾಗಿ ಅವರು ನನ್ನ ಮೇಲೆ ವ್ಯಥಾರೋಪ ಮಾಡುತ್ತಿದ್ದಾರೆ ಎಂದಿದ್ದಾರೆ ಸಿದ್ದರಾಮಯ್ಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.