ಬೆಂಗಳೂರು: ಸಹೋದ್ಯೋಗಿ ಪತ್ರಕರ್ತನ ಹತ್ಯೆಗೆ ಸುಪಾರಿ ನೀಡಿದ ಆರೋಪದಡಿ ಜೈಲು ಸೇರಿರುವ ‘ಹಾಯ್ ಬೆಂಗಳೂರು’ ಪತ್ರಿಕೆಯ ಸಂಸ್ಥಾಪಕ ರವಿಬೆಳಗೆರೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳವಾರ ರಾತ್ರಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆತರಲಾಗಿತ್ತು.
ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಬೆಳಗೆರೆ, ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ತಪಾಸಣೆ ನಡೆಸಿದ ಕಾರಾಗೃಹದ ವೈದ್ಯರು, ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದರು. ಅಂತೆಯೇ ಜೈಲು ಸಿಬ್ಬಂದಿ ರಾತ್ರಿ 7.30ರ ಸುಮಾರಿಗೆ ಆಂಬುಲೆನ್ಸ್ನಲ್ಲಿ ಅವರನ್ನು ಆಸ್ಪತ್ರೆಗೆ ಕರೆತಂದಿದ್ದರು. ಚಿಕಿತ್ಸೆ ಬಳಿಕ 9.45ಕ್ಕೆ ವಾಪಸ್ ಕಾರಾಗೃಹಕ್ಕೆ ಕರೆದೊಯ್ದರು.
ಜೈಲಿನಲ್ಲಿ ತಂದೆಯ ಭೇಟಿ: ಮಂಗಳವಾರ ಬೆಳಿಗ್ಗೆ ಬೆಳಗೆರೆ ಪುತ್ರಿ ಚೇತನಾ ಹಾಗೂ ಮಗ ಕರ್ಣ ಕಾರಾಗೃಹಕ್ಕೆ ತೆರಳಿ ತಂದೆಯ ಆರೋಗ್ಯ ವಿಚಾರಿಸಿದರು. ಮನೆಯಿಂದ ತಂದಿದ್ದ ಉಪಾಹಾರ ನೀಡಿ, ಅರ್ಧ ತಾಸಿನ ನಂತರ ಕಾರಾಗೃಹದಿಂದ ಹೊರನಡೆದರು ಎಂದು ಜೈಲು ಮೂಲಗಳು ತಿಳಿಸಿವೆ.
ಮಧುಗಾಗಿ ಶೋಧ: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಅವರಿಗೆ ಸಿಸಿಬಿ ಕಚೇರಿಯಿಂದ ಬೆದರಿಕೆ ಕರೆ ಮಾಡಿದ್ದ ಆರೋಪ ಸಂಬಂಧ ರವಿಬೆಳಗೆರೆ ಅವರ ಸಹಾಯಕ ಮಧು ಪತ್ತೆಗೆ ಸುಬ್ರಹ್ಮಣ್ಯಪುರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.