ADVERTISEMENT

ಊರಲ್ಲಿ ಮಡುಗಟ್ಟಿದ ದುಃಖ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 19:30 IST
Last Updated 9 ಅಕ್ಟೋಬರ್ 2011, 19:30 IST

ಚಡಚಣ: ಕರ್ತವ್ಯ ನಿರ್ವಹಣೆ ಮಾಡುವ ಸಂದರ್ಭದಲ್ಲಿ ಶನಿವಾರ ನಕ್ಸಲ್ ಗುಂಡಿಗೆ ಬಲಿಯಾದ ಕರ್ನಾಟಕ ಸಶಸ್ತ್ರ ಮೀಸಲು ಪೋಲಿಸ್ ಪಡೆಯ ಪೇದೆ ಮಹಾದೇವ ಮಾನೆ (42) ವಿಜಾಪುರ ಜಿಲ್ಲೆ ಚಡಚಣ ಸಮೀಪದ ಬಾಳಗಾಂವ ಗ್ರಾಮದವರು. ಅವರ ಮನೆಯಲ್ಲಿ ಈಗ ನೀರವ ಮೌನ, ದುಃಖ ಮಡುಗಟ್ಟಿದೆ.

ಮಾನೆ ಅವರ ಗ್ರಾಮ ಮಹಾರಾಷ್ಟ್ರದ ಜತ್ತ ತಾಲ್ಲೂಕಿಗೆ ಸೇರಿದೆ. ಆದರೆ ಮಹಾದೇವ ಹುಟ್ಟಿ ಬೆಳದದ್ದು ವಿಜಾಪುರ ಜಿಲ್ಲೆ ಇಂಡಿ ತಾಲ್ಲೂಕು ರೇವತಗಾಂವ ಗ್ರಾಮದ ಸೋದರ ಮಾವ, ನಿವೃತ್ತ ಸೈನಿಕ ದಿವಂಗತ ರಾಮೂ ಮಾನೆ ಅವರ ಮನೆಯಲ್ಲಿ. ವಿದ್ಯಾಭ್ಯಾಸ ಮುಗಿಸಿದ್ದು ಬೆಳಗಾವಿ ಜಿಲ್ಲೆಯ ಸಂಕೇಶ್ವರ ಗ್ರಾಮದಲ್ಲಿ.

ಮಹಾದೇವ 1996ರಲ್ಲಿ ದಕ್ಷಿಣ ಸೋಲಾಪೂರ ಜಿಲ್ಲೆಯ ಅವಜಿ ಗ್ರಾಮದ ಶೋಭಾ ಅವರೊಂದಿಗೆ ವಿವಾಹವಾಗಿದ್ದರು. ಮಹಾದೇವ ಅವರ ತಂದೆ ಮೃತಪಟ್ಟಿದ್ದು ಈಗ ಅವರ ತಾಯಿ ಭಾಗೀರಥಿ (65) ವ್ಯವಸಾಯ ಮಾಡಿಕೊಂಡು, ಇನ್ನಿಬ್ಬರು ಮಕ್ಕಳಾದ ಬನಸಿದ್ದ ಮಾನೆ ಹಾಗೂ ರೇವಣಸಿದ್ದ ಮಾನೆ ಅವರೊಂದಿಗೆ ಗ್ರಾಮದಲ್ಲಿ ವಾಸವಾಗಿದ್ದಾರೆ. ಮಹಾದೇವ ಅವರ ಹಿರಿಯ ಸೋದರ ಶ್ರೀಶೈಲ ಮಾನೆ ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿ ಪಶ್ಚಿಮ ಬಂಗಾಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಮಹಾದೇವ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೇ ಬಾಲಗಾಂವ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿಕೊಂಡಿದೆ. ತಾಯಿ ಭಾಗೀರಥಿ, ಸೋದರರು, ಬಂಧುಗಳು ದುಃಖ ಮೇರೆ ಮೀರಿದೆ.
ಮಹಾದೇವ ಮಾನೆ ಅವರ ಪಾರ್ಥಿವ ಶರೀರ ಸೋಮವಾರ ಬೆಳಗ್ಗೆ ಹತ್ತು ಗಂಟೆಗೆ ಬಾಲಗಾಂವ ಗ್ರಾಮಕ್ಕೆ ಬರಲಿದ್ದು, ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.