ಬೆಂಗಳೂರು: ‘ಇಟಲಿ ಮೂಲದವರಾದ ನನ್ನ ತಾಯಿ ನಾನು ಕಂಡಿರುವ ಎಷ್ಟೋ ಭಾರತೀಯರಿಗಿಂತಲೂ ದೇಶದ ಉತ್ತಮ ಪ್ರಜೆ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
‘ನನ್ನ ತಾಯಿ ಇಟಲಿ ಮೂಲದವರು. ಅವರ ಜೀವನ ಬಹುಪಾಲು ಸಮಯವನ್ನು ಭಾರತದಲ್ಲಿ ಕಳೆದಿದ್ದಾರೆ. ನಾನು ಕಂಡಿರುವ ಎಷ್ಟೋ ಭಾರತೀಯರಿಗಿಂತಲೂ ನನ್ನ ತಾಯಿ ಉತ್ತಮ ಭಾರತೀಯಳು. ಈ ದೇಶಕ್ಕಾಗಿ ಆಕೆ ಸಾಕಷ್ಟು ತ್ಯಾಗ ಮಾಡಿದ್ದಾಳೆ, ನೋವುಂಡಿದ್ದಾಳೆ. ಸೋನಿಯಾ ಮತ್ತು ರಾಹುಲ್ ಬಗ್ಗೆ ಮಾತನಾಡುವುದರಿಂದ ಅವರಿಗೆ ಖುಷಿ ಆಗುತ್ತೆ ಎಂಬುದಾದರೆ ಮಾತನಾಡಲಿ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಮುಂದೆ ನಮಗೂ ಸಮಯ ಬರುತ್ತದೆ’ ಎಂದರು.
ದೇವಸ್ಥಾನ ಮತ್ತು ಐತಿಹಾಸಿಕ ಸ್ಥಳಗಳಿಗೆ ಭೇಟಿ ಕೊಟ್ಟಿದ್ದೇನೆ. ಜಾತಿಗಳನ್ನು ಒಡೆಯುವ ಯಾವುದೇ ಸಂಸ್ಥೆಗಳಿಗೆ ನಾನು ಹೋಗಿಲ್ಲ. ನಾವು ಅನುಸರಿಸುವ ಪದ್ಧತಿ ನಂಬಿಕೆಯೇ ಧರ್ಮ. ಹಿಂದು ಅನ್ನುವ ಬಿಜೆಪಿ ನಾಯಕರಿಗೆ ಹಿಂದು ಪದದ ಅರ್ಥ ಗೊತ್ತಿಲ್ಲ ಎಂದು ಟಾಂಗ್ ನೀಡಿದರು.
ಕನ್ನಡ ಅಸ್ಮಿತೆ ಉಳಿಸಲು ಬದ್ಧ
ಕಾಂಗ್ರೆಸ್ಗೆ ಬಹುಮತ ಬರುತ್ತದೆ. ಅತಂತ್ರ ವಿಧಾನಸಭೆ ಇರುವುದಿಲ್ಲ. ಈ ಚುನಾವಣೆ ಕನ್ನಡದ ಅಸ್ಮಿತೆ ಮೇಲೆ ನಡೆಯುತ್ತಿದೆ. ಕರ್ನಾಟಕ ಜನ ಕಾಂಗ್ರೆಸ್ಸನ್ನು ಆರಿಸುತ್ತಾರೆ.
ಬಸವ ತತ್ವವೇ ನಮ್ಮ ತತ್ವ. ಅದೇ ನಮಗೆ ಸ್ಪಿರಿಟ್. ಆರ್ಎಸ್ಎಸ್ ಕರ್ನಾಟಕವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ. ನಾವು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ.
ಭಾಷೆ, ಸಂಸ್ಕೃತಿ ಮತ್ತು ಬಸವ ತತ್ವದ ಮೇಲೆ ಸವಾರಿ ಮಾಡಲು ಆರ್ಎಸ್ಎಸ್ ಹೊರಟಿದೆ. ಆರ್ಎಸ್ಎಸ್ ಐಡಿಯಾಲಜಿ ಮತ್ತು ಕರ್ನಾಟಕದ ಅಸ್ಮಿತೆಯ ಮಧ್ಯೆ ನಡೆಯುವ ಹೋರಾಟ ಈ ಚುನಾವಣೆ. ಕರ್ನಾಟಕದ ಅಸ್ಮಿತೆಯನ್ನ ಉಳಿಸಲು ಬದ್ಧರಾಗಿದ್ದೇವೆ ಎಂದು ಹೇಳಿದರು.
ಪಾಕಿಸ್ತಾನದೊಂದಿಗೆ ಇರುವ ಗಡಿ ಸಮಸ್ಯೆ ಹಾಗೂ ಚೀನಾದೊಂದಿಗಿನ ಡೊಕ್ಲಾಮ್ ಬಿಕ್ಕಟ್ಟು ಬಗೆಹರಿಸಲು ಮುಂದಾಗದೆ ಅಜೆಂಡಾ ಆಗಿ ಮಾರ್ಪಾಡು ಮಾಡಿಕೊಳ್ಳುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.