ADVERTISEMENT

ಕಲಾವಿದ ರಾಮನರಸಯ್ಯ ನಿಧನ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2012, 19:59 IST
Last Updated 23 ಡಿಸೆಂಬರ್ 2012, 19:59 IST

ಮೈಸೂರು: ಅರಮನೆಯ ಹಿರಿಯ ಚಿತ್ರ ಕಲಾವಿದ ರಾಮನರಸಯ್ಯ (91) ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಮಧ್ಯರಾತ್ರಿ ಮೃತಪಟ್ಟರು. ಇವರಿಗೆ ಪತ್ನಿ ಜಯಲಕ್ಷ್ಮಿ, ಚಿತ್ರ ಕಲಾವಿದರಾದ ಚಂದ್ರಿಕಾ, ಸುಧಾ ಸೇರಿ 6 ಮಂದಿ ಹೆಣ್ಣು ಮಕ್ಕಳು, ಇಬ್ಬರು ಪುತ್ರರು ಇದ್ದಾರೆ.

ತಮಿಳುನಾಡಿನ ಕೊಯಮತ್ತೂರಿಗೆ ಹದಿನೈದು ದಿನಗಳ ಹಿಂದೆ ಹೋಗಿದ್ದ ರಾಮನರಸಯ್ಯ ಅವರಿಗೆ ಅಪಘಾತದಲ್ಲಿ ಕಾಲಿಗೆ ಪೆಟ್ಟಾಗಿತ್ತು. ಶುಕ್ರವಾರವಷ್ಟೇ ಮೈಸೂರಿಗೆ ಬಂದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 1922ರಲ್ಲಿ ಮೈಸೂರಿನಲ್ಲಿ ಜನಿಸಿದ ರಾಮನರಸಯ್ಯ ಅವರು ಚಾಮರಾಜೇಂದ್ರ ದೃಶ್ಯ ಕಲಾ ಅಕಾಡೆಮಿಯಲ್ಲಿ ವ್ಯಾಸಂಗ ಮಾಡಿದ್ದರು.

ವಿದ್ಯಾರ್ಥಿ ದಿಸೆಯಿಂದಲೇ ಚಿತ್ರ ಬಿಡಿಸುವುದರಲ್ಲಿ ನಿಸ್ಸೀಮರಾಗಿದ್ದರು. ಸಾಂಪ್ರದಾಯಿಕ ಕಲೆಗೆ ಇವರು ಹೆಸರುವಾಸಿ. ಇವರು ರಚಿಸಿದ ಸಾಂಪ್ರದಾಯಿಕ ಮತ್ತು ವರ್ಣಚಿತ್ರಗಳನ್ನು ಜಗನ್ಮೋಹನ ಅರಮನೆ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಖಾಸಗಿ ಗ್ಯಾಲರಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಇರುವ ಜಯಚಾಮರಾಜೇಂದ್ರ ಒಡೆಯರ್ ಅವರ ಸಾಂಪ್ರದಾಯಿಕ ಶೈಲಿಯ ಚಿತ್ರ ನೋಡುಗರ ಗಮನ ಸೆಳೆಯುತ್ತದೆ. ಅವರ ಚಿತ್ರಗಳಲ್ಲಿ ಜೀವಂತಿಕೆ ಇದೆ.

ಜಗನ್ಮೋಹನ ಅರಮನೆಯಲ್ಲಿ ಕ್ಯುರೇಟರ್ ಆಗಿದ್ದ ರಾಮನರಸಯ್ಯ ಅವರು ತಾವು ಕಲಿತ ಸಾಂಪ್ರದಾಯಿಕ ಕಲೆಯನ್ನು ಶಿಷ್ಯಕೋಟಿಗೆ ಹೇಳಿಕೊಟ್ಟಿದ್ದಾರೆ. ವೃದ್ಧಾಪ್ಯದಲ್ಲಿಯೂ ಅವರು ಸಾಂಪ್ರದಾಯಿಕ ಶೈಲಿಯ ಚಿತ್ರಕಲೆಯನ್ನು ಆಸಕ್ತ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದರು. ಕಲಾಕ್ಷೇತ್ರದಲ್ಲಿ ಇವರು ಮಾಡಿದ ಸೇವೆಗೆ ಮೈಸೂರು ದಸರಾ ಪ್ರಶಸ್ತಿ, ಲಲಿತಕಲಾ ಅಕಾಡೆಮಿ ಪ್ರಶಸ್ತಿ, ಎಂ.ಟಿ.ಆಚಾರ್ಯ, ರಾಜ್ಯೋತ್ಸವ ಪ್ರಶಸ್ತಿಗಳು ಸಂದಿದ್ದವು. ವಿವಿಧ ಸಂಘ ಸಂಸ್ಥೆಗಳು ಇವರನ್ನು ಗೌರವಿದ್ದವು. ವಿಜಯನಗರ 4ನೇ ಹಂತದಲ್ಲಿರುವ ಮನೆಯಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಚಿತ್ರ ಕಲಾವಿದರು, ಗಣ್ಯರು ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದರು. ಚಾಮುಂಡಿ ಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಭಾನುವಾರ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.