ನಂಜನಗೂಡು: ಕುರಿ, ಮೇಕೆ ಕಳ್ಳನೆಂದು ಅನುಮಾನಿಸಿದ ತಾಲ್ಲೂಕಿನ ಕೋರೆಹುಂಡಿ ಗ್ರಾಮಸ್ಥರು ರಮೇಶ್ ಅಲಿಯಾಸ್ ಕೊತ್ತಿ (43) ಎಂಬುವರನ್ನು ಭಾನುವಾರ ನಸುಕಿನಲ್ಲಿ ಕಂಬಕ್ಕೆ ಕಟ್ಟಿ ಹೊಡೆದು ಕೊಂದಿದ್ದಾರೆ.
ತಾಲ್ಲೂಕಿನ ಬದನವಾಳು ಗ್ರಾಮದ ರಾಮಯ್ಯ ಎಂಬುವವರ ಪುತ್ರ ರಮೇಶ್ ಗಾರೆ ಕೆಲಸ ಮಾಡಿಕೊಂಡಿದ್ದರು. ಐದು ವರ್ಷಗಳಿಂದ ಚಾಮಲಾ ಪುರ ಹುಂಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕೋರೆಹುಂಡಿಯ ಚಂದ್ರಶೇಖರ್ ಎಂಬುವವರ ಕೊಟ್ಟಿಗೆಯಲ್ಲಿ ರಮೇಶ್ ಅವಿತುಕೊಂಡಿದ್ದನ್ನು ಗಮನಿಸಿದ ಗ್ರಾಮಸ್ಥರು, ಅವರನ್ನು ಹಿಡಿದು ಪ್ರಶ್ನಿಸಿದ್ದರು ಎಂದು ನಂಜನಗೂಡು ಗ್ರಾಮಾಂತರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
‘ಯಾರೋ ನನ್ನ ಮೇಲೆ ಹಲ್ಲೆ ನಡೆಸಲು ಅಟ್ಟಾಡಿಸಿಕೊಂಡು ಬಂದರು. ತಪ್ಪಿಸಿಕೊಳ್ಳಲು ಕೊಟ್ಟಿಗೆಗೆ ಬಂದು ಅವಿತುಕೊಂಡೆ’ ಎಂದು ರಮೇಶ್ ಹೇಳಿದ್ದಾರೆ.
ಆದರೆ, ಈ ಮಾತಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಗ್ರಾಮಸ್ಥರು ಕುರಿ, ಮೇಕೆ ಕಳವು ಮಾಡಲು ಬಂದಿರುವ ಕಳ್ಳನೆಂದು ಕಂಬಕ್ಕೆ ಕಟ್ಟಿ ದೊಣ್ಣೆಗಳಿಂದ ಹೊಡೆದಿದ್ದಾರೆ. ಇದರಿಂದ ರಮೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ’ ಎಂದು ವಿವರಿಸಿದ್ದಾರೆ.
ಚಂದ್ರಶೇಖರ್ ಹಾಗೂ ಕೆಂಪರಾಜು ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಾಸಿಕೊಳ್ಳಲಾ ಗಿದ್ದು, ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಆರಂಭಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.