ADVERTISEMENT

ಕಸ್ತೂರಿರಂಗನ್‌ ವರದಿ: 55 ಗ್ರಾಮ ಕೈಬಿಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 19:30 IST
Last Updated 22 ಮಾರ್ಚ್ 2014, 19:30 IST

ಮಡಿಕೇರಿ: ಕಸ್ತೂರಿ­ರಂಗನ್ ಸಮಿತಿ  ಗುರು­­ತಿ­ಸಿರುವ  ಪರಿ­ಸರ ಸೂಕ್ಷ್ಮ­ವ­ಲ­ಯ ವ್ಯಾಪ್ತಿ­­ಯಿಂದ ಕೊಡ­­­ಗಿನ 55  ಗ್ರಾಮ­­­­­ಗಳನ್ನು ಕೈ­ ಬಿಡು­­­ವಂತೆ  ವಿಧಾನ ಪರಿಷತ್‌ ಮಾಜಿ ಸದಸ್ಯಎ.ಕೆ.­ ಸುಬ್ಬ­ಯ್ಯ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾ­ಗೋಷ್ಠಿ­ಯಲ್ಲಿ ಮಾತನಾಡಿದ ಅವರು, ಜನ­ವಸತಿ ಇರುವ ಗ್ರಾಮಗಳು ಹಾಗೂ ಖಾಸಗಿ ಜಮೀನುಗಳನ್ನು ಪರಿಸರ ಸೂಕ್ಷ್ಮವಲಯ ವ್ಯಾಪ್ತಿಯಿಂದ ಕೈ­ಬಿಡ­ಬೇಕು ಎಂದು ಅಭಿಪ್ರಾಯಪಟ್ಟರು.

ಪಶ್ಚಿಮಘಟ್ಟ ವ್ಯಾಪ್ತಿಯ ಸುತ್ತ­ಮುತ್ತ­ಲಿನ ಪ್ರದೇಶವನ್ನು ಕಸ್ತೂರಿ ರಂಗನ್‌ ಸಮಿತಿಯು ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿದೆ. ಈ ಪ್ರದೇ­ಶ­ದಲ್ಲಿ ಗಣಿಗಾರಿಕೆ, ಆಸ್ಪತ್ರೆ ತೆರೆ­ಯ­ದಂತೆ ಹಾಗೂ ಕೃಷಿಯಲ್ಲಿ ರಸಾ­ಯನಿಕ ಪದಾರ್ಥ ಬಳಸದಂತೆ ನಿರ್ಬಂಧ ಹೇರ­ಲಾ­ಗಿದೆ. ವರದಿಯ ಶಿಫಾ­­ರಸು ಜಾರಿಗೆ ಬಂದರೆ ಜನಜೀವನ ಅಸ್ತ­­ವ್ಯಸ್ತಗೊಳ್ಳ­ಲಿದೆ. ಹಾಗಾಗಿ, ಜನ­ವಸತಿ ಇರುವ ಗ್ರಾಮ­ಗಳನ್ನು ಹಾಗೂ ಖಾಸಗಿ ಜಮೀ­ನು­ಗಳನ್ನು ಪರಿಸರ ಸೂಕ್ಷ್ಮ­ವಲಯದಿಂದ ಕೈಬಿಡಬೇಕು ಎಂದು ಹೇಳಿದರು.

ಸಹಜವಾಗಿ ಬೆಳೆದಿರುವ ಅರಣ್ಯ ಪ್ರದೇ­ಶವನ್ನು (ಅರಣ್ಯ ಕಾಯ್ದೆಗಳು ಜಾರಿ­­­­ಯಲ್ಲಿರುವಂತಹ ಪ್ರದೇಶ) ‘ನ್ಯಾಚು­­ರಲ್ ಲ್ಯಾಂಡ್‌ಸ್ಕೇಪ್‌’ ಎಂದೂ ಹಾಗೂ ಖಾಸಗಿ ಜಾಗಗಳನ್ನು ‘ಕಲ್ಚ­ರಲ್‌ ಲ್ಯಾಂಡ್‌ಸ್ಕೇಪ್‌’ ಎಂದು ವರದಿ­ಯಲ್ಲಿ ಉಲ್ಲೇಖಿಸಲಾಗಿದೆ.

ಇವೆರಡೂ ಪ್ರದೇಶವನ್ನು ಸ್ಪಷ್ಟವಾಗಿ ಗುರುತಿ­ಸಬೇಕು ಹಾಗೂ ‘ಕಲ್ಚರಲ್‌ ಲ್ಯಾಂಡ್‌­ಸ್ಕೇಪ್‌’ ಪ್ರದೇಶವನ್ನು ಪರಿಸರ ಸೂಕ್ಷ್ಮವ­ಲ­ಯದ ವ್ಯಾಪ್ತಿಯಿಂದ ಕೈಬಿಡಬೇಕು ಎಂದು ಮನವಿ ಮಾಡಿದರು.

ಈ ವಿಷಯದಲ್ಲಿ ಈಗಾಗಲೇ ಕೇರಳ ಸರ್ಕಾರ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ, ಅಲ್ಲಿರುವ ‘ಕಲ್ಚರಲ್‌ ಲ್ಯಾಂಡ್‌­ಸ್ಕೇಪ್‌’ ಪ್ರದೇಶವನ್ನು ಸೂಕ್ಷ್ಮಪರಿಸರ ವಲ­­ಯದಿಂದ ವಿನಾಯಿತಿ ಪಡೆದು­ಕೊಂಡಿದೆ. ಇದೇ ಕ್ರಮವನ್ನು ಕರ್ನಾ­ಟ­ಕದ ಸರ್ಕಾರ ಕೂಡ ಮಾಡಬೇಕಾಗಿದೆ ಎಂದರು.
ಸಮಿತಿಯ ವರದಿಯನ್ನು ಸ್ವೀಕರಿಸಿ­ರುವ ಕೇಂದ್ರ ಪರಿಸರ ಸಚಿವಾಲಯವು ಈಗಾ­ಗಲೇ ಕರಡು ಅಧಿಸೂಚನೆಯನ್ನು ಹೊರ­ಡಿಸಿದೆ. ವರದಿಯ ಬಗ್ಗೆ ಅಭಿ­ಪ್ರಾಯ ತಿಳಿಸುವಂತೆ ರಾಜ್ಯ ಸರ್ಕಾರ­ಗಳಿಗೆ 60 ದಿನಗಳ ಕಾಲಾವಕಾಶ ಕೂಡ ನೀಡಿದೆ.

ಈ ಅವಕಾಶವನ್ನು ರಾಜ್ಯ ಸರ್ಕಾರ ಉಪಯೋಗಿಸಿಕೊಂಡು, ತನ್ನ ವಾದ­ವನ್ನು ಮಂಡಿಸಬೇಕಾಗಿದೆ ಎಂದು ಹೇಳಿದರು.

ಏನಿದು ವರದಿ?
ಕರ್ನಾಟಕ, ಕೇರಳ, ತಮಿಳು­ನಾಡು, ಗೋವಾ, ಮಹಾ­ರಾಷ್ಟ್ರ ಹಾಗೂ ಗುಜ­ರಾತ್‌ ರಾಜ್ಯ­ಗಳಲ್ಲಿ 1,600 ಕಿ.ಮೀ ಉದ್ದ­­ದಷ್ಟು ಪಶ್ಚಿ­ಮ­­ಘಟ್ಟ ಹರಡಿ­ಕೊಂಡಿದೆ. ಇಲ್ಲಿ­ರುವ ಜೀವವೈವಿಧ್ಯ ಸಂ­ರ­ಕ್ಷಿಸುವ ದೃಷ್ಟಿ­ಯಿಂದ ಕೇಂದ್ರ ಸರ್ಕಾರ ಕಸ್ತೂರಿ­ರಂಗನ್‌ ನೇತೃತ್ವ­ದಲ್ಲಿ ಸಮಿತಿ ರಚಿ­ಸಿತ್ತು. ಸಮಿತಿಯು 6 ರಾಜ್ಯ­ಗಳ 59,940 ಚ.ಕಿ.ಮೀ ಪ್ರದೇಶ­­ವನ್ನು ಪರಿ­ಸರ ಸೂಕ್ಷ್ಮ­ವಲಯ ಎಂದು ಗುರುತಿ­ಸಿತ್ತು. ಇದರ­ಲ್ಲಿ ಕರ್ನಾಟಕದ 1,550 ಗ್ರಾಮ­ಗಳು ಕೂಡ ಸೇರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.