ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಾಂಜಾ ಮಾಫಿಯಾ ಕಾಂಗ್ರೆಸ್ ಮುಖಂಡರ ಹಿಡಿತದಲ್ಲೇ ಇದೆ. ಸಚಿವರು ಸೇರಿದಂತೆ ಕಾಂಗ್ರೆಸ್ಸಿಗರು ಗಾಂಜಾ ಹಣದಲ್ಲಿ ಬದುಕುತ್ತಿದ್ದಾರೆ’ ಎಂದು ಸಂಸದ ನಳಿನ್ಕುಮಾರ್ ಕಟೀಲ್ ಆರೋಪಿಸಿದರು.
ಶುಕ್ರವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ನಾಲ್ಕು ವರ್ಷಗಳಿಂದ ಗಾಂಜಾ ಮಾರಾಟ ಹೆಚ್ಚಾಗಿದೆ. ಈ ಮಾಫಿಯಾ ಮಟ್ಟಹಾಕಲು ಪೊಲೀಸ್ ಇಲಾಖೆಯಲ್ಲಿ ಪ್ರತ್ಯೇಕ ತಂಡ ರಚಿಸಬೇಕೆಂಬ ಬೇಡಿಕೆ ಇದೆ. ಈವರೆಗೆ ಯಾವ ಕ್ರಮವೂ ಆಗಿಲ್ಲ. ಸಚಿವರು ಮತ್ತು ಕಾಂಗ್ರೆಸ್ ಪಕ್ಷದ ಹಲವು ಮುಖಂಡರ ನೇರ ಹಿಡಿತದಲ್ಲಿ ಗಾಂಜಾ ಮಾಫಿಯಾ ಇದೆ. ಈ ಕಾರಣಕ್ಕಾಗಿಯೇ ಗಾಂಜಾ ಮಾಫಿಯಾವನ್ನು ಪೊಲೀಸರು ನಿಯಂತ್ರಿಸುತ್ತಿಲ್ಲ’ ಎಂದು ವಾಗ್ದಾಳಿ ನಡೆಸಿದರು.
‘ಜಿಲ್ಲೆಯಲ್ಲಿ ಗಾಂಜಾ ಮಾರಾಟ ಜಾಲ ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ರಾಜ್ಯ ಸರ್ಕಾರ ಈ ವಿಷಯದಲ್ಲಿ ಸೋತಿದೆ. ಜಿಲ್ಲೆಯಲ್ಲಿ ನಡೆದಿರುವ ಹಲವಾರು ಕೊಲೆಗಳಿಗೆ ಗಾಂಜಾ ಮಾಫಿಯಾದ ನಂಟಿದೆ ಎಂಬ ಆರೋಪವಿದೆ. ಕ್ರಮ ಜರುಗಿಸಬೇಕಾದ ಸ್ಥಾನದಲ್ಲಿರುವ ಆಡಳಿತ ಪಕ್ಷದ ಮುಖಂಡರೇ ಗಾಂಜಾ ಮಾಫಿಯಾವನ್ನು ಬೆಂಬಲಿಸುತ್ತಿದ್ದಾರೆ. ರಾಜ್ಯ ಸರ್ಕಾರ ಈ ಮಾಫಿಯಾ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.