ADVERTISEMENT

ಕಾಯ್ದೆ ವ್ಯಾಪ್ತಿಗೆ ಧಾರ್ಮಿಕ ಸಂಸ್ಥೆ: ಖಂಡನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 17:25 IST
Last Updated 19 ಫೆಬ್ರುವರಿ 2011, 17:25 IST

ಬೆಂಗಳೂರು: ಧಾರ್ಮಿಕ ಅಲ್ಪಸಂಖ್ಯಾತರಾದ ಸಿಖ್, ಜೈನ್, ಬೌದ್ಧರ ಧಾರ್ಮಿಕ ಸಂಸ್ಥೆಗಳನ್ನು ಧಾರ್ಮಿಕ ದತ್ತಿ ಕಾಯ್ದೆ ವ್ಯಾಪ್ತಿಗೆ ತರಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿರುವುದನ್ನು ಸಾಹಿತಿ ಪ್ರೊ. ಹಂಪ ನಾಗರಾಜಯ್ಯ ತೀವ್ರವಾಗಿ ಖಂಡಿಸಿದ್ದಾರೆ.ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಿಂದು ಮಠಗಳನ್ನು ಕಾಯ್ದೆ ವ್ಯಾಪ್ತಿಯಿಂದ ದೂರವಿಟ್ಟು ಅಲ್ಪಸಂಖ್ಯಾತರ ಮೇಲೆ ನಿಯಂತ್ರಣ ಹೇರುವ ಹುನ್ನಾರ ಘೋರ ಅಪರಾಧ ಎಂದಿದ್ದಾರೆ.

ಸರ್ಕಾರದ ಈ ಕ್ರಮದ ಹಿಂದೆ ಸ್ಥಾಪಿತ ಹಿತಾಸಕ್ತಿಗಳ ಕೈವಾಡ ಇದೆ. ಈ ರೀತಿಯ ಪೂರ್ವಗ್ರಹ ಪೀಡಿತ ಪಿತೂರಿ ಕಳವಳಕಾರಿಯಾಗಿದೆ. ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರನ್ನು ರಕ್ಷಿಸುತ್ತದೆ ಎಂಬ ನಂಬಿಕೆ ಹುಸಿಯಾಗಿದೆ ಎಂದು ಹಂಪನಾ ಆಪಾದಿಸಿದ್ದಾರೆ.ರಾಜ್ಯ ಹಾಗೂ ರಾಷ್ಟ್ರದ ಸಾಮರಸ್ಯಗಳನ್ನು ಕದಡದೆ ಮುಖ್ಯ ವಾಹಿನಿಯಲ್ಲಿ ಮಿಳಿತವಾಗಿರುವ ಈ ಸಮುದಾಯದ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದಂತಾಗಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಈ ನಿರ್ಧಾರವನ್ನು ಹಿಂದೆಗೆದುಕೊಳ್ಳುವ ಅಗತ್ಯ ಇದೆ ಎಂದು ಅವರು ಆಗ್ರಹಿಸಿದ್ದಾರೆ.

ಸರ್ಕಾರದ ಈ ನಿಲುವು ಅಲ್ಪಸಂಖ್ಯಾತರ ವಲಯಗಳಲ್ಲಿ ತೀವ್ರ ಅಸಮಾಧಾನದ ಅಲೆ ಎಬ್ಬಿಸಿರುವುದಂತೂ ನಿಜ. ಹೀಗಾಗಿ ಸರ್ಕಾರ ಇನ್ನಾದರೂ ಸರಿದಿಕ್ಕಿನಲ್ಲಿ ಯೋಚಿಸಿ ಈ ನಿರ್ಧಾರದಿಂದ ಹಿಂದೆ ಸರಿಯುವುದು ಒಳಿತು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.