ಚಿಕ್ಕಬಳ್ಳಾಪುರ: ತಾಲ್ಲೂಕಿನ ಕಣಿವೆನಾರಾಯಣಪುರ ಸಮೀಪದಲ್ಲಿರುವ ಚೆನ್ನರಾಯಸ್ವಾಮಿ ಬೆಟ್ಟಕ್ಕೆ ಮಂಗಳವಾರ ಸ್ನೇಹಿತರೊಂದಿಗೆ ಜಲಪಾತ ನೋಡಲು ಬಂದಿದ್ದ ದೊಡ್ಡಬಳ್ಳಾಪುರದ ವಿದ್ಯಾರ್ಥಿ ನವೀನ್ (21) ಕಾಲು ಜಾರಿ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾರೆ.
‘ದೊಡ್ಡಬಳ್ಳಾಪುರ ಪಟ್ಟಣದ ನಿವಾಸಿ ಸುಬ್ಬಯ್ಯ ಎಂಬುವರ ಪುತ್ರನಾದ ನವೀನ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿ.ಕಾಂ ಅಂತಿಮ ವರ್ಷದಲ್ಲಿ ಓದುತ್ತಿದ್ದ. ಮಂಗಳವಾರ ಆತ ಮನೆಯಲ್ಲಿ ಚೆನ್ನರಾಯಸ್ವಾಮಿ ಬೆಟ್ಟದ ಫಾಲ್ಸ್ ನೋಡಿ ಬರುವುದಾಗಿ ಹೇಳಿ ಬಂದಿದ್ದ.
(ವಿದ್ಯಾರ್ಥಿ ನವೀನ್)
ಬೆಟ್ಟದ ಕಾಲು ಭಾಗ ಏರಿದ್ದ ವಿದ್ಯಾರ್ಥಿಗಳೆಲ್ಲ ಅಲ್ಲಿ ನೀರಾಟದಲ್ಲಿ ಮಗ್ನರಾಗಿದ್ದರು. ಈ ವೇಳೆ ನವೀನ್ ಕಾಲು ಜಾರಿ ಬೆಟ್ಟದ ಮೇಲೆ ಇರುವ ನೀರಿನ ಗುಂಡಿಯೊಂದಕ್ಕೆ ಬಿದ್ದು ಅರೆಪ್ರಜ್ಞಾವಸ್ಥೆ ಸ್ಥಿತಿಗೆ ಜಾರಿದ್ದಾನೆ. ಕೂಡಲೇ ಆತನನ್ನು ರಕ್ಷಿಸಿದ ಗೆಳೆಯರು ಆಂಬುಲೆನ್ಸ್ನಲ್ಲಿ ದೊಡ್ಡಬಳ್ಳಾಪುರ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ ಆತ ಮೃತಪಟ್ಟಿದ್ದಾನೆ’ ಎಂದು ನಂದಿಗಿರಿಧಾಮ ಠಾಣೆ ಪೊಲೀಸರು ತಿಳಿಸಿದರು.
‘ತಮ್ಮ ಮಗ ನೀರಾಟದ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ ಎಂದು ನವೀನ್ ಪೋಷಕರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.