ಚಿಕ್ಕಬಳ್ಳಾಪುರ: ‘ಮುಂಬರುವ ಚುನಾವಣೆಯಲ್ಲಿ ವಾಮಮಾರ್ಗದಲ್ಲಿ ಗೆಲ್ಲಬೇಕು ಎನ್ನುವ ಉದ್ದೇಶದಿಂದ ಬಿಜೆಪಿಯ ಕೆಲ ನಾಯಕರು ರಾಜ್ಯದಲ್ಲಿ ಕೋಮು ಗಲಭೆಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇವತ್ತು ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಗಲಭೆಗಳಿಗೆ ಬಿಜೆಪಿಯೇ ನೇರ ಕಾರಣ. ಬಿಜೆಪಿ ಐದಾರು ಮುಖಂಡರು ಇದೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ನಾನು ಹೇಳುವುದಲ್ಲ ಇತ್ತೀಚೆಗೆ ವೈರಲ್ ಆಗಿರುವ ಪ್ರತಾಪ್ ಸಿಂಹ ಮತ್ತು ಈಶ್ವರಪ್ಪ ಅವರು ಮಾತನಾಡಿರುವ ವಿಡಿಯೊ ನೋಡಿ’ ಎಂದು ಹೇಳಿದರು.
‘ಇನ್ನು ಅನಂತಕುಮಾರ್ ಹೆಗಡೆ ಅವರದು ಮನುಷ್ಯರು, ಸುಸಂಸ್ಕೃತರು, ವಿದ್ಯಾವಂತರು ಮಾತನಾಡುವ ಭಾಷೆನಾ? ಶೋಭಾ ಕರಂದಾಜ್ಲೆ ಅವರು ತಾವೇ ವೈದ್ಯರೆಂದು ತಿಳಿದುಕೊಂಡಂತಿದೆ. ಹೊನ್ನಾವರದ ಯುವಕ ಪರೇಶ ಮೇಸ್ತ ಶವ ನೋಡಿದ ತಕ್ಷಣವೇ ಸುಳ್ಳು, ಸುಳ್ಳು ಹೇಳಿಕೆಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು.
‘ದಕ್ಷಿಣ ಕನ್ನಡದಲ್ಲಿ ನಡೆದ ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಭಾರಿ ಜನರು ಸೇರಿದ್ದು ನೋಡಿ ಬಿಜೆಪಿಯವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಹೇಗಾದರೂ ಮಾಡಿ ಚುನಾವಣೆಯಲ್ಲಿ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಮುಖ ರಾಕ್ಷಸನಂತಿದೆ ಎನ್ನುವವರು ಮೊದಲು ತಮ್ಮ ಮುಖಗಳನ್ನು ಕನ್ನಡಿಯಲ್ಲಿ ನೋಡಿಕೊಳ್ಳಲಿ. ಆ ಮೇಲೆ ಮಾತನಾಡಲಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಹುಲ್ ಸ್ಪರ್ಧೆ ಉಹಾಪೋಹ:
‘ರಾಹುಲ್ ಗಾಂಧಿ ಅವರಿಗೆ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವಂತೆ ಆಹ್ವಾನಿಸಿಲ್ಲ. ಆ ಚರ್ಚೆ ಯಾರು ಪ್ರಾರಂಭಿಸಿದ್ದಾರೆ ಅವರನ್ನು ಕೇಳಿ. ನಾನು ಯಾರನ್ನೂ ಆಹ್ವಾನ ಮಾಡಿಲ್ಲ. ಯಾರೆಲ್ಲ ಎಲ್ಲೆಲ್ಲಿ ಸ್ಪರ್ಧೆ ಮಾಡಬೇಕೋ ಅಲ್ಲಲ್ಲಿ ಮಾಡುತ್ತಾರೆ. ಅದರಲ್ಲಿ ಉಹಾಪೋಹ ಎಬ್ಬಿಸಿಕೊಂಡು ಮಾತನಾಡಲು ಆಗುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಸಂಸದ ವೀರಪ್ಪ ಮೊಯಿಲಿ ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.