ADVERTISEMENT

ಗಾಯಾಳುಗಳ ಸ್ಥಿತಿ ಇನ್ನೂ ಚಿಂತಾಜನಕ

ಬೆಳಗಾವಿ ವಿದ್ಯುತ್ ಅವಘಡ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 19:59 IST
Last Updated 19 ಸೆಪ್ಟೆಂಬರ್ 2013, 19:59 IST

ಬೆಳಗಾವಿ: ಬುಧವಾರ ರಾತ್ರಿ ನಗರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ವಿದ್ಯುತ್‌ ಸ್ಪರ್ಶದಿಂದ ಗಾಯಗೊಂಡ ಆರು ಜನರ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಕೆಎಲ್‌ಇ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸದಾಶಿವನಗರದ ನಿವಾಸಿಗಳಾದ ಸಾಹಿಲ್‌ ಕಾಜುಕರ್‌ (16), ಸೋಮೇಶ ಮಡಿವಾಳ (16) ಹಾಗೂ ಸಚಿನ್‌ ಕುಂಪಿ (18) ಅವರ ತಲೆಗೆ ಪೆಟ್ಟು ಬಿದ್ದಿದೆ. ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿರುವ ಇವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬಸವರಾಜ ಕೋಲಕಾರ (33) ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಪ್ಲಾಸ್ಟಿಕ್‌ ಸರ್ಜರಿ ವಿಭಾಗಕ್ಕೆ ಸ್ಥಳಾಂತರಿಸಲಾಗಿದೆ. ಆರೋಗ್ಯದಲ್ಲಿ ಸ್ಥಿರತೆ ಕಂಡುಬಂದ ಹಿನ್ನೆಲೆಯಲ್ಲಿ ಸಂತೋಷ ಕಾಳೆ (48) ಹಾಗೂ ಅಪ್ಪಾಜಿ ಮಾಳವಾಡಕರ್‌ (55) ಎಂಬುವವರನ್ನು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ ಮೃತಪಟ್ಟಿದ್ದ ಗೀತಾ ಗಜಾನನ ಸಪ್ಲೆ (42), ಸುಜಲ್‌ ಸಪ್ಲೆ (10), ಗಂಗಪ್ಪ ಮುದಲಿ (52) ಹಾಗೂ ಪ್ರಜ್ವಲ್‌ ಅನಿಲ್‌ ಮಾಳಿ (16) ಅವರ ಮನೆಗೆ ಸಕ್ಕರೆ ಸಚಿವ ಪ್ರಕಾಶ ಹುಕ್ಕೇರಿ, ಸಂಸದ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಜಿಲ್ಲಾಧಿಕಾರಿ ಎನ್‌. ಜಯರಾಮ್‌ ಗುರುವಾರ ಭೇಟಿ ನೀಡಿ ಕುಟುಂಬ­ದವರಿಗೆ ಸಾಂತ್ವನ ಹೇಳಿದರು.

‘ಹೆಸ್ಕಾಂ’ನಿಂದ ರೂ.1 ಲಕ್ಷ ಪರಿಹಾರ: ಘಟನೆ­ಯಲ್ಲಿ ಮೃತಪಟ್ಟವರ ಕುಟುಂಬ­ದವರಿಗೆ ‘ಹೆಸ್ಕಾಂ’ ವತಿಯಿಂದ ತಲಾ ರೂ.1 ಲಕ್ಷ  ಹಾಗೂ ಗಾಯಾಳುಗಳಿಗೆ ಚಿಕಿತ್ಸೆಗಾಗಿ ತಲಾ ರೂ. 40,000 ಪರಿಹಾರ ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.