ADVERTISEMENT

ಗುಲ್ಬರ್ಗ ವಿವಿ ಕುಲಪತಿ ವಜಾಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಮೇ 2012, 19:30 IST
Last Updated 9 ಮೇ 2012, 19:30 IST

ಗುಲ್ಬರ್ಗ: ಗುಲ್ಬರ್ಗ ವಿಶ್ವವಿದ್ಯಾಲಯವು ದೂರ ಶಿಕ್ಷಣ ನೀತಿ ಅಡಿಯಲ್ಲಿ ದೇಶದಾದ್ಯಂತ 70 ಎಂ.ಬಿ.ಎ. ಕಾಲೇಜುಗಳ ಸ್ಥಾಪನೆಗೆ ಅನಧಿಕೃತ ಅನುಮೋದನೆ ನೀಡುವ ಮೂಲಕ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಹಾಳು ಮಾಡಿದೆ.

ರಾಜ್ಯಪಾಲರು ಕೂಡಲೇ ಗುಲ್ಬರ್ಗ ವಿವಿ ಕುಲಪತಿ ಹಾಗೂ ಕುಲಸಚಿವರನ್ನು ವಜಾಗೊಳಿಸಬೇಕು ಎಂದು ಮಾಜಿ ಕಾರ್ಮಿಕ ಸಚಿವ ಎಸ್.ಕೆ. ಕಾಂತಾ ಬುಧವಾರ ಇಲ್ಲಿ ಆಗ್ರಹಿಸಿದರು.`ದೂರ ಶಿಕ್ಷಣ ನೀತಿ ಅಡಿಯಲ್ಲಿ ಗುಲ್ಬರ್ಗ ವಿವಿ ಸಿದ್ಧಪಡಿಸಿದ ನಿಯಮಾವಳಿ~ ಕಡತ ಇನ್ನೂ ರಾಜ್ಯಪಾಲರ ಬಳಿಯಲ್ಲೆ ನೆನೆಗುದಿಗೆ ಬಿದ್ದಿದೆ.

ಆದರೂ ಕುಲಪತಿ ಡಾ. ಈ.ಟಿ. ಪುಟ್ಟಯ್ಯ ಮತ್ತು ಕುಲಸಚಿವ ಡಾ. ಎಸ್.ಎಲ್. ಹಿರೇಮಠ ಅವರು ಕೂಡಿಕೊಂಡು ಅವ್ಯವಹಾರ ಆರಂಭಿಸಿ ಎಂ.ಬಿ.ಎ.  ಕಾಲೇಜುಗಳ ಸ್ಥಾಪಿಸಲು ಅನುಮೋದನೆ ನೀಡಿದ್ದಾರೆ~ ಎಂದು ಸುದ್ದಿಗೋಷ್ಠಿಯಲ್ಲಿ ಸಂಬಂಧಿಸಿದ ದಾಖಲೆಗಳನ್ನು ಪ್ರದರ್ಶಿಸಿದರು.

`ವಿವಿ ಅನುಮೋದನೆ ಪಡೆದ ಈ ಕಾಲೇಜುಗಳು ಪುಣೆ, ಮುಂಬೈ, ಬೆಂಗಳೂರು, ಗುಲ್ಬರ್ಗ ಸೇರಿದಂತೆ ದೇಶದಾದ್ಯಂತ 2011ರಲ್ಲೆ ಸ್ಥಾಪನೆಯಾಗಿವೆ. ಅನೇಕ ವಿದ್ಯಾರ್ಥಿಗಳು ಇಂತಹ ಕಾಲೇಜುಗಳಲ್ಲಿ ಸುಮಾರು ರೂ 1.85 ಲಕ್ಷ ಶುಲ್ಕ ಭರಿಸಿ ಪ್ರವೇಶ ಪಡೆದುಕೊಂಡಿದ್ದಾರೆ. ಎಂಟು ತಿಂಗಳಾದರೂ ಮೊದಲ ಸೆಮಿಸ್ಟರ್ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ ದೊರೆತಿಲ್ಲ. ನಿಯಮಾವಳಿಗೆ ರಾಜ್ಯಪಾಲರು ಅನುಮತಿ ನೀಡದೆ ಪರೀಕ್ಷೆ ನಡೆಸುವುದು ಅಸಾಧ್ಯವಾಗಿದೆ~ ಎಂದರು.

ಕ್ರಿಮಿನಲ್ ಮೊಕದ್ದಮೆ: ವಿದ್ಯಾರ್ಥಿಗಳ ಭವಿಷ್ಯ ಹಾಳಾಗಲು ಕಾರಣವಾಗಿರುವ ಕುಲಸಚಿವ, ಕುಲಪತಿ ಹಾಗೂ ಇವರೊಂದಿಗೆ ಒಪ್ಪಂದ ಮಾಡಿಕೊಂಡು ಕಾಲೇಜು ಆರಂಭಿಸಿರುವ ಮುಖ್ಯಸ್ಥರ ವಿರುದ್ಧ ಕೂಡಲೇ ಭಾರತೀಯ ದಂಡ ಸಂಹಿತೆ 420ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.