ಕೊಪ್ಪ: ತಾಲ್ಲೂಕಿನ ಪ್ರತಿಷ್ಠಿತ ಕ್ವಾರ್ಡ್ಹಿತ್ಲು ಚಹಾ ಕಾರ್ಖಾನೆ ಶುಕ್ರವಾರ ರಾತ್ರಿ ಆಕಸ್ಮಿಕ ಅಗ್ನಿ ದುರಂತಕ್ಕೀಡಾಗಿ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ರೂ. 5 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಈ ಅನಾಹುತ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.
ತಾಲ್ಲೂಕಿನಲ್ಲಿ ವೈದ್ಯಕೀಯ ಕಾಲೇಜು, ಆಸ್ಪತ್ರೆ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳ ಸ್ಥಾಪಕರಾಗಿರುವ ಪ್ರಸಿದ್ಧ ಕಾಫಿ ಬೆಳೆಗಾರ ಆರೂರು ರಮೇಶ್ರಾವ್ ಒಡೆತನದ ಮೈಸೂರು ಪ್ಲಾಂಟೇಷನ್ಸ್ ಲಿ. ಸಂಸ್ಥೆಗೆ ಸೇರಿದ ಈ ಚಹಾ ಕಾರ್ಖಾನೆಯಲ್ಲಿ 13 ಮಂದಿ ಕಾರ್ಮಿಕರು ಆಹೋರಾತ್ರಿ ದುಡಿಯು ತ್ತಿದ್ದು, ಚಹಾ ಹಂಗಾಮು ಇಲ್ಲದ ಕಾರಣ ಕೆಲ ದಿನಗಳಿಂದ ಕಾರ್ಖಾನೆ ಸ್ಥಗಿತಗೊಂಡಿದ್ದರಿಂದ ಪ್ರಾಣಹಾನಿ ತಪ್ಪಿದೆ.
ಶುಕ್ರವಾರ ಸಂಜೆಯಷ್ಟೇ ರಮೇಶ್ ರಾವ್ ಅವರು ಅನಾರೋಗ್ಯ ನಿಮಿತ್ತ ಮಗನ ಮನೆಯಲ್ಲಿರುವ ತಮ್ಮ ಪತ್ನಿಯ ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ತೆರಳಿದ್ದಾಗ ಈ ದುರ್ಘಟನೆ ನಡೆದಿದೆ.
ಮಧ್ಯರಾತ್ರಿ 11.45ರ ವೇಳೆಗೆ ಕಾರ್ಖಾ ನೆಗೆ ಬೆಂಕಿ ತಗುಲಿದ್ದನ್ನು ಕಂಡ ಕಾವಲು ಸಿಬ್ಬಂದಿ ವ್ಯವಸ್ಥಾಪಕರ ಗಮನಕ್ಕೆ ತಂದಿದ್ದು, ಅವರ ಕೋರಿಕೆಯಂತೆ 20 ನಿಮಿಷದಲ್ಲಿ ಕೊಪ್ಪದಿಂದ ಧಾವಿಸಿ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರಾದರೂ ಅಷ್ಟರಲ್ಲಾಗಲೇ ಬೆಂಕಿಯ ಕೆನ್ನಾಲಿಗೆ ಕಾರ್ಖಾನೆಯನ್ನೆಲ್ಲ ವ್ಯಾಪಿಸಿತು.
ಶೃಂಗೇರಿ ಮತ್ತು ಎನ್.ಆರ್.ಪುರದ ಅಗ್ನಿಶಾಮಕ ದಳ, ಸುತ್ತಮುತ್ತಲ ಗ್ರಾಮಸ್ಥರು, ಎಸ್ಟೇಟ್ ಕಾರ್ಮಿಕರು ಧಾವಿಸಿಬಂದು ಬೆಂಕಿ ಆರಿಸಲು ಕೈಜೋಡಿಸಿದರು. ಪರಿಣಾಮವಾಗಿ ಕಾರ್ಯಾಲಯದ ಕೊಠಡಿ, ಕಾರ್ಮಿಕರ ವಸತಿ ಸಮು ಚ್ಚಯ, ಕಟ್ಟಿಗೆಯ ಗೋಡೌನ್ಗಳನ್ನು ಅಗ್ನಿ ಅನಾಹುತದಿಂದ ರಕ್ಷಿಸಲಾಯಿತು.
ಕಾರ್ಖಾನೆ ಮರುಸ್ಥಾಪನೆಗೆ ವರ್ಷಾನುಗಟ್ಟಲೆ ಸಮಯ ಬೇಕಾಗುವುದರಿಂದ ಇಲ್ಲಿನ ತೋಟದಲ್ಲಿ ಬೆಳೆದ ಚಹಾ ಎಲೆಗಳನ್ನು ಸದ್ಯಕ್ಕೆ ಪಕ್ಕದ ದೇವನ್ ಟೀ ಕಾರ್ಖಾನೆಗೆ ಕೊಟ್ಟು ಚಹಾಪುಡಿ ತಯಾರಿಸುವುದಾಗಿ ತೋಟದ ವ್ಯವಸ್ಥಾಪಕ ಪ್ರೇಮ್ ಕುಮಾರ್ ತಿಳಿಸಿದರು.
ನಾಲ್ಕು ವರ್ಷದ ಹಿಂದೆ ತಾಲ್ಲೂಕಿನ ಅಲಗೇಶ್ವರ ಎಸ್ಟೇಟ್ನ ಚಹಾ ಕಾರ್ಖಾನೆ ಇದೇ ರೀತಿ ಉರಿದು ಬೂದಿಯಾಗಿದ್ದು, ತಾಲ್ಲೂಕಿನಲ್ಲಿ ಇದು ಎರಡನೇ ಅತಿದೊಡ್ಡ ಅಗ್ನಿ ದುರಂತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.