ADVERTISEMENT

ಚಿಕ್ಕಮಗಳೂರು ಉದ್ರಿಕ್ತ, ಪೊಲೀಸರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 17:40 IST
Last Updated 16 ಫೆಬ್ರುವರಿ 2011, 17:40 IST

ಚಿಕ್ಕಮಗಳೂರು: ಕ್ಷುಲ್ಲಕ ಕಾರಣಕ್ಕಾಗಿ ನಗರ ಠಾಣೆ ಸಬ್ ಇನ್ಸ್‌ಪೆಕ್ಟರ್ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ಅವರ ಮೇಲೆ ಗುಂಪೊಂದು ಬುಧವಾರ ಸಂಜೆ ಹಲ್ಲೆ ನಡೆಸಿದ್ದು ಕಲ್ಲು ತೂರಾಟದಲ್ಲಿ ಪೊಲೀಸರು ಸೇರಿದಂತೆ ಹಲವರಿಗೆ ಗಾಯಗಳಾಗಿವೆ.

ಈದ್ ಮಿಲಾದ್ ಮೆರವಣಿಗೆ ಹನುಮಂತಪ್ಪ ವೃತ್ತದಿಂದ ಎಂ.ಜಿ. ರಸ್ತೆ ಪ್ರವೇಶಿಸುವ ಮಾರ್ಗದಲ್ಲಿ ನಿಂತಿದ್ದ ಆಟೋರಿಕ್ಷಾವನ್ನು ತೆರವು ಮಾಡುವಂತೆ ಪೊಲೀಸರು ಸೂಚಿಸಿದರು. ಇದರಿಂದ ಕುಪಿತಗೊಂಡ ಗುಂಪು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳನ್ನು ಥಳಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಪೊಲೀಸರು ಹಾಗೂ ಹೀಗೂ ಪರಿಸ್ಥಿತಿ ನಿಯಂತ್ರಿಸಿ ನಿಟ್ಟುಸಿರು ಬಿಡುವ ಹೊತ್ತಿಗೆ ಮೆರವಣಿಗೆ ಅಂಡೆಛತ್ರ ತಲುಪಿತು.ಮೆರವಣಿಗೆಯಲ್ಲಿದ್ದ ದುಷ್ಕರ್ಮಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಕಲ್ಲು ತೂರಾಟದಲ್ಲಿ   ಹಲವರಿಗೆ ಗಾಯಗಳಾದವು.

ನಂತರ ಪೊಲೀಸರು ಲಾಠಿ ಪ್ರಹಾರ ಮಾಡಿ ಗುಂಪು ಚದುರಿಸಿದರು. ಪ್ರಸ್ತುತ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದರೂ ನಿಯಂತ್ರಣದಲ್ಲಿದೆ. ಮೆರವಣಿಗೆಯ ಗುಂಪಿನಲ್ಲಿದ್ದ ಕೆಲವರು ಸ್ವನಿಯಂತ್ರಣ ಕಳೆದುಕೊಂಡು ವರ್ತಿಸಿದ್ದೇ ಇದಕ್ಕೆಲ್ಲಾ ಕಾರಣ. ಪೊಲೀಸರನ್ನು ಥಳಿಸಿದ ವ್ಯಕ್ತಿಗಳ ಗುರುತು ಪತ್ತೆಯಾಗಿಲ್ಲ.  ಅಪರಿಚಿತರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಅಡಿಷನಲ್ ಎಸ್‌ಪಿ ಮಿತ್ರ ಹೆರಾಜೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.