ದೇವನಹಳ್ಳಿ: ಪೂರ್ಣಗೊಳ್ಳದ ಜಿಲ್ಲಾಡಳಿತ ಕಚೇರಿ ಕಟ್ಟಡವನ್ನು ಉದ್ಘಾಟನೆ ನೆರವೇರಿಸಲಾಗಿದೆ. ಆದರೆ ಈಗಲೂ ಕಾಮಗಾರಿ ಸ್ಥಗಿತವಾಗಿರುವುದಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇವನಹಳ್ಳಿಯನ್ನು ಗ್ರಾಮಾಂತರ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಿದ ನಂತರ ₹ 43 ಕೋಟಿ ವೆಚ್ಚದಲ್ಲಿ ಜಿಲ್ಲಾಡಳಿತ ಕಚೇರಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಕಾಮಗಾರಿ ಆರಂಭಗೊಂಡು 18 ತಿಂಗಳು ಕಳೆದಿದ್ದರೂ ಪೂರ್ಣಗೊಂಡಿರಲಿಲ್ಲ. ಆದರೂ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟಡವನ್ನು ಉದ್ಘಾಟಿಸಿದರು ಎಂಬುದು ಸ್ಥಳೀಯರ ಆರೋಪ.
‘ಕಾಮಗಾರಿ ಆರಂಭದಲ್ಲಿ ಕುಂಟುತ್ತಾ ಸಾಗಿತ್ತು. ಆದರೆ, ಚುನಾವಣೆ ಹತ್ತಿರ ಬಂದಾಗ ಇದಕ್ಕೆ ಚುರುಕು ಸಿಕ್ಕಿತ್ತು’ ಎಂದು ದುದ್ದನಹಳ್ಳಿಯ ಜೆಡಿಎಸ್ ಮುಖಂಡ ಮುನಿರಾಜು ಹೇಳಿದರು. ‘ಈ ಕಟ್ಟಡದಲ್ಲಿ 37 ಇಲಾಖೆಗಳು ಕಾರ್ಯ ನಿರ್ವಹಿಸಬೇಕಿತ್ತು. ಆದರೆ, ಕಟ್ಟಡದ ಶೇ 25ರಷ್ಟು ಕಾಮಗಾರಿಯೂ ಪೂರ್ಣಗೊಳ್ಳದ ಕಾರಣ ಅನನುಕೂಲವೇ ಆಗಿದೆ’ ಎಂದು ಇಲ್ಲಿನ ನಿವಾಸಿ ರಾಜಣ್ಣ ಅಸಮಾಧಾನ ತೋಡಿಕೊಂಡರು.
‘ಕಟ್ಟಡ ನಿರ್ಮಾಣಕ್ಕೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಿಲ್ಲ. ಮರಳು ಸಹ ಕಳಪೆ ಗುಣಮಟ್ಟದ್ದು ಬಳಸಲಾಗಿದೆ. ಈ ಬಗ್ಗೆ ದೂರು ನೀಡಿದ್ದರೂ ಯಾವ ಅಧಿಕಾರಿಗಳೂ ಗಮನ ಹರಿಸಲಿಲ್ಲ’ ಎಂದೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.