ADVERTISEMENT

ಟೆಂಡರ್‌ಗೆ ತಡೆ ನೀಡಲು ಹೈಕೋರ್ಟ್‌ ನಕಾರ

ಉಡುಪಿಗೆ ನೀರು ಪೂರೈಕೆ–ಪೈಪ್‌ಲೈನ್‌ ಅಳವಡಿಕೆ ಪ್ರಶ್ನಿಸಿ ಅರ್ಜಿ

​ಪ್ರಜಾವಾಣಿ ವಾರ್ತೆ
Published 10 ಮೇ 2018, 20:27 IST
Last Updated 10 ಮೇ 2018, 20:27 IST
ಟೆಂಡರ್‌ಗೆ ತಡೆ ನೀಡಲು ಹೈಕೋರ್ಟ್‌ ನಕಾರ
ಟೆಂಡರ್‌ಗೆ ತಡೆ ನೀಡಲು ಹೈಕೋರ್ಟ್‌ ನಕಾರ   

ಬೆಂಗಳೂರು: ವಾರಾಹಿ ನದಿಯಿಂದ ಉಡುಪಿಗೆ ಕುಡಿಯುವ ನೀರು ಪೂರೈಸುವುದಕ್ಕೆ ಸಂಬಂಧಿಸಿದಂತೆ ಪೈಪುಗಳನ್ನು ಅಳವಡಿಸಲು ಕರೆಯಲಾಗಿರುವ ಟೆಂಡರ್‌ ಪ್ರಕ್ರಿಯೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.

ಈ ಕುರಿತಂತೆ ಉಡುಪಿ ಜಿಲ್ಲಾ ರೈತಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ನ್ಯಾಯಮೂರ್ತಿ ಅರವಿಂದ ಕುಮಾರ್ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್ ಅವರಿದ್ದ ರಜಾಕಾಲದ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ (ಕೆಯುಐಡಿಎಫ್‌ಸಿ) ಕಾರ್ಯಪಾಲಕ ಎಂಜಿನಿಯರ್‌, ಉಡುಪಿ ನಗರಸಭೆ ಆಯುಕ್ತರು, ಕರ್ನಾಟಕ ನೀರಾವರಿ ನಿಗಮದ ಶಿವಮೊಗ್ಗ ವಲಯದ ಮುಖ್ಯ ಎಂಜಿನಿಯರ್‌ಗೆ ನೋಟಿಸ್‌ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ.

ADVERTISEMENT

ಅರ್ಜಿಯಲ್ಲಿ ಏನಿದೆ?: ‘ಉಡುಪಿ ನಗರಕ್ಕೆ 40 ಕಿ.ಮೀನಷ್ಟು ದೂರ ಪೈಪ್ ಲೈನ್‌ ಅಳವಡಿಸಿ ನೀರು ತರುವ ಅಗತ್ಯವಿಲ್ಲ. ಸೀತಾನದಿ ಅಥವಾ ಸ್ವರ್ಣಾ ನದಿಯಿಂದಲೇ ತರಬಹುದು. ಆದರೆ ವಾರಾಹಿ ನದಿಯಿಂದ 41 ಎಂಎಲ್‌ಡಿ ನೀರು ತರಲು ಉದ್ದೇಶಿಸಿರುವುದು ಸರಿಯಲ್ಲ’ ಎಂಬುದು ಅರ್ಜಿದಾರರ ಆಕ್ಷೇಪ.

‘2016ರಲ್ಲಿಯೇ ಉಡುಪಿ ನಗರಕ್ಕೆ ವಾರಾಹಿ ನದಿಯಿಂದ ಸುಮಾರು ₹ 122 ಕೋಟಿ ವೆಚ್ಚದಲ್ಲಿ ಅಮೃತ್ ಯೋಜನೆಯಡಿ ಕೊಳವೆ ಮಾರ್ಗ ಅಳವಡಿಸಿ ಕುಡಿಯುವ ನೀರು ಒದಗಿಸಲು ಉದ್ದೇಶಿಸಲಾಗಿತ್ತು. ಈ ಯೋಜನೆ ಕಾರ‍್ಯಸಾಧುವಲ್ಲ ಎಂದು ಕೈಬಿಡಲಾಗಿತ್ತು. ಆದರೆ, ಈಗ ಪುನಃ ಪೈಪ್‌ಲೈನ್ ಅಳವಡಿಕೆಗೆ ಟೆಂಡರ್ ಕರೆಯಲಾಗಿದೆ. ಇದರಿಂದ ವೃಥಾ ಹಣ ಪೋಲಾಗಲಿದೆ’ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಅರ್ಜಿದಾರರ ಪರ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.