ADVERTISEMENT

ತಲೆಬುರುಡೆ ಸಿಕ್ಕ ಸ್ಥಳ ಮಾರಾಟ!

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 19:30 IST
Last Updated 7 ಜನವರಿ 2012, 19:30 IST

ಅಣ್ಣಿಗೇರಿ (ಧಾರವಾಡ ಜಿಲ್ಲೆ): ತೀವ್ರ ಕುತೂಹಲ ಕೆರಳಿಸಿದ್ದ,  ತಲೆಬುರುಡೆಗಳು ಪತ್ತೆಯಾದ ಇಲ್ಲಿಯ ಜಾಗವನ್ನು ಮಾರಾಟ ಮಾಡಿರುವ ಪ್ರಸಂಗ ಶನಿವಾರ ಬೆಳಕಿಗೆ ಬಂದಿದ್ದು, ಸಾರ್ವಜನಿಕರು ಹಾಗೂ ಇತಿಹಾಸಕಾರರು ಹುಬ್ಬೇರಿಸುವಂತೆ ಮಾಡಿದೆ.

ಅಣ್ಣಿಗೇರಿ ಪಟ್ಟಣದಲ್ಲಿ 2010ರ  ಅಗಸ್ಟ್ 28 ರಂದು ಸುಮಾರು 600 ತಲೆಬುರುಡೆಗಳು ಪತ್ತೆಯಾಗಿದ್ದವು. ವಿವಿಧ ಪರೀಕ್ಷೆಗಳಿಗಾಗಿ ಜಿಲ್ಲಾಡಳಿತ ಈ ತಲೆಬುರುಡೆಯನ್ನು ಅಹಮದಾಬಾದ್ ಪ್ರಯೋಗಾಲಯಕ್ಕೆ ಕಳಿಸಿದ್ದು, ಇತ್ತ ನಿವೇಶನ ಮಾರಾಟ ಮಾರಾಟಗೊಂಡಿದೆ.

ತಲೆಬುರುಡೆ ಸಿಕ್ಕಿರುವ ಪ್ರದೇಶವನ್ನು ಜಿಲ್ಲಾಡಳಿತ ಹಾಗೂ ಪ್ರಾಚ್ಯವಸ್ತು ಇಲಾಖೆ ಸಂರಕ್ಷಿತ ಪ್ರದೇಶವೆಂದು ಘೋಷಿಸಿದೆ. ವಸತಿ ನಿವೇಶನ ಸಂಖ್ಯೆ ಸಿ.ಸ.ನಂ 130/ಬ ಕ್ಷೇತ್ರ 1-06 ಹಾಗೂ ಸಿ.ಸ.ನಂ 130/ಬ ಕ್ಷೇತ್ರ 2-05 ಅದರ ಮೂಲ ಮಾಲೀಕರಾದ ಮುಮ್ಮಾಜ್‌ಬೇಗಂ ಠಾಣೇದ, ಹುಸೇನಸಾಬ ಠಾಣೇದ, ಖ್ವಾಜಾಮಹ್ಮದ್ ಹುಸೇನ ಠಾಣೇದ ಹಾಗೂ ಮಹಬೂಬಬೀ ಅಬ್ದುಲ್ ರಸೂಲ ಕಿತ್ತೂರ ಅವರು ಆ ಸ್ಥಳವನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದಾರೆ. ಈ ನಿವೇಶನವನ್ನು ಶಾಹಿದಾಬೇಗಂ ಶಹಾಬುದ್ದೀನ್ ಮೂಲಿಮನಿ ಹಾಗೂ ಶಹಾಬುದ್ದಿನ್ ಮಾಬುಸಾಬ ಮೂಲಿಮನಿ ಎಂಬುವರಿಗೆ ನವಲಗುಂದ ತಾಲೂಕಾ ಉಪನೋಂದಣಿ ಆಧಿಕಾರಿಯ ದಸ್ತಾವೇಜು ಸಂಖ್ಯೆ 470/12ರ ಮೂಲಕ ಒಟ್ಟು 2,63,000/- ರೂ.ಗಳಿಗೆ ಮಾರಾಟ ಮಾಡಿರುವ ಮೂಲ ದಾಖಲೆಗಳು `ಪ್ರಜಾವಾಣಿ~ ಪ್ರತಿನಿಧಿಗೆ ದೊರಕಿವೆ.

ಮಾಹಿತಿಗೆ ಡಿಸಿ ಸೂಚನೆ: `ಜಿಲ್ಲೆಯ ಅಣ್ಣಿಗೇರಿಯಲ್ಲಿ ಪತ್ತೆಯಾಗಿರುವ ತಲೆಬುರುಡೆ ಜಾಗೆಯನ್ನು ಮಾರಾಟ ಮಾಡದಂತೆ ಜಿಲ್ಲಾ ಆಡಳಿತ ಅಥವಾ ಪ್ರಾಚ್ಯವಸ್ತು ಇಲಾಖೆ ಯಾವುದೇ ಷರತ್ತು ಹಾಕಿಲ್ಲ` ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ `ಪ್ರಜಾವಾಣಿ~ಗೆ ಸ್ಪಷ್ಟಪಡಿಸಿದ್ದಾರೆ.

~ತಲೆಬುರುಡೆ ಪತ್ತೆಯಾದ ಜಾಗವು ಖಾಸಗಿಯವರಿಗೆ ಸೇರಿದ್ದು, ಅದರ ಮಾಲೀಕತ್ವ ಬದಲಾವಣೆಯಾದರೆ ಯಾವುದೇ ಪ್ರತಿಕೂಲ ಪರಿಣಾಮ ಉಂಟಾಗುವುದಿಲ್ಲ. ಯಾವುದೇ ಕಾರಣಕ್ಕೂ ತಲೆಬುರುಡೆಗೆ ಹಾನಿ ಆಗಬಾರದು ಎಂದು ಆದೇಶಿಸಲಾಗಿದೆ~ ಎಂದು ಅವರು ತಿಳಿಸಿದರು.

~ಈ ಜಾಗೆಯನ್ನು ಮಾರಾಟ ಮಾಡಿರುವ ಬಗ್ಗೆ ನನಗೆ ಅಧಿಕೃತವಾಗಿ ಗೊತ್ತಾಗಿಲ್ಲ. ಈ ಬಗ್ಗೆ ವಿವರನ್ನು ನೀಡುವಂತೆ ಅಲ್ಲಿನ ಪುರಸಭೆಯ ಮುಖ್ಯಾಧಿಕಾರಿಗೆ ಸೂಚಿಸಲಾಗಿದೆ~ ಎಂದು ಜೈನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.