ಬೆಂಗಳೂರು: ನಿಯಮಾವಳಿ ಉಲ್ಲಂಘಿಸಿ 37 ಮಂದಿ ಬೋಧಕೇತರ ಸಿಬ್ಬಂದಿಯ ಪ್ರೊಬೇಷನರಿ ಅವಧಿ ಮುಕ್ತಾಯಗೊಳಿಸಿದ ತುಮಕೂರು ವಿಶ್ವವಿದ್ಯಾಲಯದ ಕ್ರಮ ಕಾನೂನು ಬಾಹಿರ ಎಂದು ಉನ್ನತ ಶಿಕ್ಷಣ ಇಲಾಖೆ ಹೇಳಿದೆ.
ಈ ಹಗರಣ ನಡೆದಿದ್ದು ಡಾ. ಎಸ್.ಸಿ. ಶರ್ಮಾ ಕುಲಪತಿಯಾಗಿದ್ದ ಅವಧಿಯಲ್ಲಿ. ಇದನ್ನು ಜನವರಿ 7ರಂದು ‘ಪ್ರಜಾವಾಣಿ’ ಬೆಳಕಿಗೆ ತಂದಿತ್ತು. ಇದೇ ವರದಿ ಆಧರಿಸಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ತುಮಕೂರು ವಿಶ್ವವಿದ್ಯಾಲಯದ ಕುಲಪತಿಗೆ ಮಾ.7ರಂದು ಷೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
ಬೋಧಕೇತರ ಸಿಬ್ಬಂದಿಯ ಪ್ರೊಬೇಷನರಿ ಅವಧಿ ಮುಕ್ತಾಯವಾಗಿರುವುದನ್ನು ಘೋಷಿಸಲು ಬೆಂಗಳೂರು ವಿ.ವಿ ನಿಯಮಾವಳಿಗಳನ್ನು ತುಮಕೂರು ವಿ.ವಿ ಅನುಸರಿಸಿದೆ. ಆದರೆ ಇದು ನೇಮಕಾತಿ ಮತ್ತು ಮುಂಬಡ್ತಿಗೆ ಮಾತ್ರ ಅನ್ವಯವಾಗುತ್ತದೆಯೇ ಹೊರತು ಪೂರ್ವಾವಧಿ ಮುಕ್ತಾಯ ಘೋಷಿಸಲು ಅಲ್ಲ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ನಿಯಮಾವಳಿ ರಚಿಸಿಕೊಂಡು ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯಬೇಕು.
ಆದರೆ, ಇದ್ಯಾವುದನ್ನು ಪಾಲಿಸದೆ ಕಾಯಂ ಪೂರ್ವ ಸೇವಾವಧಿ ಮುಕ್ತಾಯವಾಗಿದೆ ಎಂದು ಘೋಷಿಸಿರುವುದು ಕಾನೂನುಬಾಹಿರ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.