ರಾಣೆಬೆನ್ನೂರು/ ವಿಜಯಪುರ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ, ದಾಖಲೆ ಇಲ್ಲದೇ ಸಾಗಿಸುತ್ತಿದ್ದ ₹11.5 ಲಕ್ಷ ನಗದನ್ನು ಹಾವೇರಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಚುನಾವಣಾಧಿಕಾರಿಗಳು ಸೋಮವಾರ ವಶಪಡಿಸಿಕೊಂಡಿದ್ದಾರೆ.
ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಕಾರಿನಲ್ಲಿ ಸಾಗಿಸುತ್ತಿದ್ದ, ₹ 10 ಲಕ್ಷ ನಗದನ್ನು ರಾಣೆಬೆನ್ನೂರ ತಾಲ್ಲೂಕಿನ ಮಾಕನೂರು ಚೆಕ್ಪೋಸ್ಟ್ನಲ್ಲಿ ವಶಪಡಿಸಿಕೊಳ್ಳಲಾಗಿದೆ.
ಚುನಾವಣಾ ಕರ್ತವ್ಯ ನಿಯೋಜಿತ ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ನೇತೃತ್ವದ ತಂಡವು ತಪಾಸಣೆ ನಡೆಸುವ ವೇಳೆ ಈ ಹಣ ಪತ್ತೆಯಾಗಿದ್ದು, ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ತಿಳಿಸಿದ್ದಾರೆ.
ರವಿಕುಮಾರ್ ಅವರು, ಮಂಗಳವಾರ (ಏ.3) ಕಾಗಿನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಾಲ್ಗೊಳ್ಳಲಿರುವ ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶದ ಸಿದ್ಧತೆಗಾಗಿ ಬೆಂಗಳೂರಿನಿಂದ ಬರುತ್ತಿದ್ದರು.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ವೀರೇಶ ನಗರದ ಚೆಕ್ಪೋಸ್ಟ್ ಬಳಿ ₹ 1.5 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿದೆ.
ಮುಧೋಳ ತಾಲ್ಲೂಕಿನ ಯಡಹಳ್ಳಿ ಗ್ರಾಮದ ಹನುಮಂತ ರಾಮಪ್ಪ ಕೋಳೂರ ಎಂಬುವವರು, ಪ್ರಭುಲಿಂಗೇಶ್ವರ ಸೌಹಾರ್ದ ಬ್ಯಾಂಕ್ನಿಂದ ಹಣ ಪಡೆದು, ಅದನ್ನು ರಾಯಚೂರು ಜಿಲ್ಲೆಯ ಲಿಂಗಸಗೂರ ತಾಲ್ಲೂಕಿನ ಗುರಲಗುಂಟಾ ತಾಂಡಾದ ದಾಸಪ್ಪ ಬೂದೆಪ್ಪ ರಾಠೋಡ ಎಂಬುವವರಿಗೆ ಕಬ್ಬು ಕಡಿಯುವ ಕೆಲಸಕ್ಕಾಗಿ ಕೊಡಲು ಹೊರಟಿದ್ದರು ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.