ADVERTISEMENT

ದೇಶದ ಪ್ರಥಮ ಮರಳುಶಿಲ್ಪ ಸಂಗ್ರಹಾಲಯ

ಸಿದ್ದು ಆರ್.ಜಿ.ಹಳ್ಳಿ
Published 27 ಮಾರ್ಚ್ 2014, 19:30 IST
Last Updated 27 ಮಾರ್ಚ್ 2014, 19:30 IST
ಜಲಪ್ರಪಂಚ ಪರಿಕಲ್ಪನೆಯಡಿ ಮೂಡಿಬಂದಿರುವ ಮತ್ಸ್ಯಕನ್ಯೆ ಮರಳುಶಿಲ್ಪದ ಜತೆ ಕಲಾವಿದೆ  ಎಂ.ಎನ್‌. ಗೌರಿ
ಜಲಪ್ರಪಂಚ ಪರಿಕಲ್ಪನೆಯಡಿ ಮೂಡಿಬಂದಿರುವ ಮತ್ಸ್ಯಕನ್ಯೆ ಮರಳುಶಿಲ್ಪದ ಜತೆ ಕಲಾವಿದೆ ಎಂ.ಎನ್‌. ಗೌರಿ   

ಮೈಸೂರು: ಸಾಂಸ್ಕೃತಿಕ ನಗರಿ ಹಾಗೂ ಪ್ರವಾಸಿ­ಗರ ಸ್ವರ್ಗ ಎನಿಸಿರುವ ಮೈಸೂರಿನ ಮುಕುಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ.  ದೇಶದಲ್ಲೇ ಪ್ರಪ್ರಥ­ಮ­ವಾದ ‘ಮರಳುಶಿಲ್ಪ ಸಂಗ್ರಹಾ­ಲಯ’ವು (ಸ್ಯಾಂಡ್‌ ಸ್ಕಲ್ಪ್‌ಚರ್‌ ಮ್ಯೂಸಿಯಂ) ಮೈಸೂರಿ­ನಲ್ಲಿ ನಿರ್ಮಾಣವಾಗಿದ್ದು, ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ.

ಮೈಸೂರಿನ ಮರಳುಶಿಲ್ಪ ಕಲಾವಿದೆ ಎಂ.ಎನ್‌. ಗೌರಿ ಅವರು ಶಾಶ್ವತವಾದ ಮರಳುಶಿಲ್ಪ ಸಂಗ್ರಹಾ­ಲಯ ಸ್ಥಾಪಿಸಬೇಕು ಎಂದು ಬಹುದಿನಗಳಿಂದ ಕನಸು ಕಂಡಿದ್ದರು. ಆ ಕನಸು ಅವರ ಸತತ ಪರಿಶ್ರಮ ಹಾಗೂ ಕುಟುಂಬದವರ ನೆರವಿನಿಂದ ಇಂದು ನನಸಾಗಿದೆ.

ನಗರದ ಚಾಮುಂಡಿಬೆಟ್ಟ ಮುಖ್ಯ­ರಸ್ತೆ­ಯಲ್ಲಿ­ರುವ ಜಾಕಿ ಕ್ವಾರ್ಟರ್ಸ್‌ ಸಮೀಪದ ತೆಂಗಿನ­ತೋಟದ ಸುಂದರ ಪರಿಸರದಲ್ಲಿ 1,350 (15x90 ಅಡಿ) ಚದರ ಅಡಿಯಲ್ಲಿ ಈ ಮ್ಯೂಸಿ­ಯಂ ಅನಾವರಣಗೊಂಡಿದೆ. 115 ಲಾರಿ ಲೋಡ್‌ ಮರಳನ್ನು ಬಳಸಿ, 16 ಪರಿಕಲ್ಪನೆಗಳಲ್ಲಿ 150ಕ್ಕೂ ಹೆಚ್ಚು ಕಲಾಕೃತಿಗಳನ್ನು ರಚಿಸಲಾಗಿದೆ.

ಸಾಮರಸ್ಯದ ದ್ಯೋತಕ: ಇಲ್ಲಿನ ಮರಳುಶಿಲ್ಪಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದು ಪರಿಸರ ಕಾಳಜಿ, ಸಾಂಸ್ಕೃತಿಕ ವೈಭವವನ್ನು ಕಟ್ಟಿಕೊಡುತ್ತವೆ. ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ -–ಹೀಗೆ ಅನೇಕ ಧರ್ಮಗಳಿಗೆ ಸಂಬಂಧಪಟ್ಟ ಕಲಾಕೃತಿಗಳು ಕೋಮು ಸೌಹಾರ್ದ ಬಿಂಬಿಸುತ್ತಿವೆ. ಮ್ಯೂಸಿಯಂ ಒಳಗೆ ಪ್ರವೇಶಿಸಿದ ಕೂಡಲೇ ‘ಪರಿಸರಸ್ನೇಹಿ ಗಣೇಶ’ನ ಕಲಾಕೃತಿ ಎದು­ರಾಗುತ್ತದೆ.

ಅದರ ಪಕ್ಕದಲ್ಲೇ ನಾಡಿನ ಅಧಿದೇವತೆ ‘ಶ್ರೀ ಚಾಮುಂಡೇಶ್ವರಿ’, ‘ಲಾಫಿಂಗ್‌ ಬುದ್ಧ’ನ ಕಲಾಕೃತಿಗಳು ಗಮನ ಸೆಳೆಯುತ್ತವೆ. ಮಧ್ಯಭಾ­ಗದಲ್ಲಿ ಮೈಸೂರು ದಸರಾ ವೈಭವವನ್ನು ಪ್ರತಿಬಿಂಬಿ­ಸುವ ‘ದಸರಾ ಮೆರವಣಿಗೆ’ ಹಾಗೂ ನವರಾತ್ರಿ ಸಂದರ್ಭದಲ್ಲಿ ಸಿಂಹಾಸನದಲ್ಲಿ ಆಸೀನರಾಗಿರುವ ‘ಶ್ರೀಕಂಠದತ್ತ ನರಸಿಂಹರಾಜ ಒಡೆ­ಯರ್‌’ ಕಲಾಕೃತಿಗಳು ಆಕರ್ಷಕವಾಗಿ ಮೂಡಿಬಂದಿವೆ.

12 ರಾಶಿಗಳ ಸಂಕೇತಗಳನ್ನು ಒಳಗೊಂಡಿರುವ ‘ರಾಶಿ ಚಕ್ರ’, ಮಹಾಭಾರತದಲ್ಲಿ ಯುದ್ಧಕ್ಕೆ ಹೊರಟ ‘ಕೃಷ್ಣಾರ್ಜುನರ ರಥ’ದ ಮರಳುಶಿಲ್ಪಗಳು ವಿಶಿಷ್ಟವಾಗಿವೆ. ಚೀನಾ, ಈಜಿಪ್ಟ್‌, ಬ್ಯಾಬಿಲೋ­ನಿಯಾ, ಗ್ರೀಕ್‌, ಹರಪ್ಪ ಮತ್ತು ಮೊಹೆಂಜೊ­ದಾರೊ ಮುಂತಾದ ಪ್ರಾಚೀನ ನಾಗರಿಕತೆಗಳ ಕಥೆ ಹೇಳುವ ಕಲಾಕೃತಿಗಳು ಇಲ್ಲಿವೆ.

ಮನಮೋಹಕ ಮತ್ಸ್ಯಕನ್ಯೆ: ಜಲಪ್ರಪಂಚ ಪರಿಕಲ್ಪನೆ­ಯಡಿ ಮೂಡಿಬಂದಿರುವ ಮತ್ಸ್ಯಕನ್ಯೆ, ಸಮುದ್ರ­ರಾಜ, ಮೀನು, ಆಮೆ, ಡಾಲ್ಫಿನ್‌, ಅಷ್ಟಪದಿ, ಸಮುದ್ರಕುದುರೆ, ಶಂಖು, ಕಪ್ಪೆಚಿಪ್ಪು, ಹವಳ, ಸ್ಕೂಬಾ ಡೈವರ್‌, ದೋಣಿ ಮುಂತಾದ ಆಕೃತಿಗಳು ಮನಮೋಹಕವಾಗಿದ್ದು, ಜಲಚರಗಳ ಜೀವನಶೈಲಿಯನ್ನು ಬಿಂಬಿಸುತ್ತವೆ.


ಅದರ ಪಕ್ಕದಲ್ಲೇ ಇರುವ ‘ಭೂತ ಪ್ರಪಂಚ’ದ ರಕ್ತಪಿಶಾಚಿ, ದೆವ್ವ, ಅಸ್ಥಿಪಂಜರ, ಮಾಟದ ಕುಂಬ­ಳದ ಕಲಾಕೃತಿಗಳು ನೋಡುಗರಲ್ಲಿ ಭೀತಿ­ಯನ್ನು ಉಂಟುಮಾಡುವಷ್ಟರ ಮಟ್ಟಿಗೆ ನೈಜವಾಗಿವೆ.

ಜಿಹಾದ್‌ ವಾರಿಯರ್‌, ಖುರಾನ್‌, ಮೆಕ್ಕಾ–ಮದೀನಾ, ಗುಂಬಜ್‌, ಮಿನಾರ್‌ಗಳ ಆಕೃತಿಗಳು ಮುಸ್ಲಿಂ ಧರ್ಮದ ಸಂಸ್ಕೃತಿಯನ್ನು ಎತ್ತಿ ಹಿಡಿದಿವೆ. ಇನ್ನು, ಮರಳುಗಾಡು, ಒಂಟೆ, ಈಚಲುಮರ, ‘ಊದ್‌’ ಸಂಗೀತ ಪರಿಕರ ಹಿಡಿದಿರುವ ದಂಪತಿಯ ಮರಳು­ಶಿಲ್ಪಗಳು ಅರೇಬಿಯನ್‌ ಸಂಸ್ಕೃತಿಯನ್ನು ಅನಾವರಣಗೊಳಿಸಿವೆ. ‘ಡಿಸ್ನಿಲ್ಯಾಂಡ್‌’ನಲ್ಲಿ ಮಿಕ್ಕಿ­ಮೌಸ್‌, ಟ್ವೀಟಿ, ಟಾಮ್‌ ಅಂಡ್‌ ಜೆರ್ರಿ, ಡೊನಾಲ್ಡ್‌ ಡಕ್‌ ಮಕ್ಕಳನ್ನು ಕೈ ಬೀಸಿ ಕರೆಯುತ್ತವೆ. ಕ್ರಿಸ್‌ಮಸ್‌ ಟ್ರೀ, ಸಾಂಟಾಕ್ಲಾಸ್‌, ವಿಂಟೇಜ್‌­­ಕಾರುಗಳು ಎಲ್ಲರನ್ನು ಬೆರಗುಗೊಳಿಸುತ್ತವೆ.

ವನ್ಯಜೀವಿ ರಕ್ಷಿಸಿ:
ಹುಲಿ, ಸಿಂಹ, ಗೊರಿಲ್ಲಾ, ಆನೆ, ಜಿರಾಫೆ, ನವಿಲು, ಚಿಂಪಾಂಜಿ, ಘೇಂಡಾಮೃಗ, ಹೆಬ್ಬಾವು, ನಾಗರ­ಹಾವು, ಗರುಡ ಮುಂತಾದ ಪ್ರಾಣಿ ಪಕ್ಷಿಗಳ ಕಲಾಕೃತಿಗಳು ‘ಪರಿಸರ ಉಳಿಸಿ– ವನ್ಯಜೀವಿ ರಕ್ಷಿಸಿ’ ಎಂಬ ಸಂದೇಶವನ್ನು ಸಾರುವಂತಿವೆ.

‘ಒಟ್ಟು ರೂ.16 ಲಕ್ಷ ಅಂದಾಜು ವೆಚ್ಚದ ಈ ಯೋಜ­ನೆಗೆ ಸಾಲವನ್ನು ಪಡೆದು ಮ್ಯೂಸಿಯಂ ಸ್ಥಾಪಿಸಿದ್ದೇವೆ. 115 ಲಾರಿ ಲೋಡು ಮರಳಿಗೆ ಅಗತ್ಯ­ವಿರುವಷ್ಟು ಸಂಯುಕ್ತವಸ್ತುಗಳನ್ನು ಮಿಶ್ರಣ ಮಾಡಿ ಮರಳನ್ನು ಹದಗೊಳಿಸಿಕೊಂಡು 3 ತಿಂಗಳ ನಿರಂತರ ಪ್ರಯತ್ನದಿಂದ ಮರಳುಶಿಲ್ಪಗಳನ್ನು ತಯಾ­ರಿಸಿದ್ದೇನೆ.
ಕಲಾಕೃತಿ ರಚನೆಯಲ್ಲಿ ನನ್ನ ಅಕ್ಕ ನೀಲಾಂಬಿಕಾ, ತಂದೆ ನಂಜುಂಡಸ್ವಾಮಿ, ತಾಯಿ ನಾಗ­ಲಾಂಬಿಕಾ ಅವರ ಪರಿಶ್ರಮ ಮತ್ತು ನೆರವು ಅಪಾರ. ಈ ಮ್ಯೂಸಿಯಂ ಪರಿಸರಸ್ನೇಹಿಯಾಗಿದ್ದು, ಮ್ಯೂಸಿಯಂನ ಸುತ್ತ ಹಸಿರುಬೇಲಿಯನ್ನು ಅಳವಡಿ­ಸಿದ್ದೇವೆ. ವಾಟರ್‌ಪ್ರೂಫ್‌ ಟ್ರಾನ್ಸ್‌­ಪರೆಂಟ್‌ ಶೀಟ್‌­ಗ­ಳನ್ನು ಛಾವಣಿಗೆ ಬಳಸಲಾಗಿದೆ. ಕಲಾಕೃತಿಗಳನ್ನು ಕುಳಿತು ವೀಕ್ಷಿಸಲು ತೆಂಗಿನಮರದ ತುಂಡುಗಳನ್ನು ಕುರ್ಚಿಯ ರೀತಿಯಲ್ಲಿ ಇಡಲಾಗಿದೆ.

ಮೈಸೂರಿನ ಜನತೆ ಹಾಗೂ ಪ್ರವಾಸಿಗರಿಗೆ ಯುಗಾದಿ ಹಬ್ಬದ ಕೊಡುಗೆಯಾಗಿ ಈ ಮ್ಯೂಸಿಯಂ ಅನ್ನು ಶೀಘ್ರ­ದಲ್ಲೇ ಲೋಕಾರ್ಪಣೆ­ಗೊಳಿಸಲಿದ್ದೇವೆ. ಬೆಳಿಗ್ಗೆ 7 ರಿಂದ ಸಂಜೆ 6ರವರೆಗೆ ವಾರದ ಎಲ್ಲ ದಿನಗಳಲ್ಲಿ ಪ್ರವೇಶವಿರುತ್ತದೆ’ ಎಂದು ಮರಳುಶಿಲ್ಪ ಕಲಾವಿದೆ ಗೌರಿ, ‘ಪ್ರಜಾವಾಣಿ’­ಜತೆ ಅನಿಸಿಕೆಗಳನ್ನು ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT