ADVERTISEMENT

ನಟನ ಹತ್ಯೆಗೆ ಸುಪಾರಿ; ದೂರು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 19:40 IST
Last Updated 24 ಮಾರ್ಚ್ 2018, 19:40 IST
ಅರ್ಜುನ್‌ದೇವ್
ಅರ್ಜುನ್‌ದೇವ್   

ಬೆಂಗಳೂರು: ‘ಇಸ್ಲಾಂಪುರದ ಕಾಸಿಫ್ ಎಂಬಾತ ನನ್ನನ್ನು ಕೊಲೆ ಮಾಡುವುದಾಗಿ ಯಾರಿಂದಲೋ ಸುಪಾರಿ ಪಡೆದಿದ್ದಾನೆ’ ಎಂದು ಆರೋಪಿಸಿ ಚಿತ್ರನಟ ಹಾಗೂ ಕಾಂಗ್ರೆಸ್‌ನ ದೀಪಾಂಜಲಿ ನಗರ ಘಟಕದ ಅಧ್ಯಕ್ಷ ಅರ್ಜುನ್‌ದೇವ್ ಬ್ಯಾಟರಾಯನಪುರ ಠಾಣೆಗೆ ದೂರು ಕೊಟ್ಟಿದ್ದಾರೆ.

ಇತ್ತೀಚೆಗೆ ತೆರೆಕಂಡ ‘ಯುಗಪುರುಷ’ ಕನ್ನಡ ಚಿತ್ರದಲ್ಲಿ ನಾಯಕನ ಪಾತ್ರ ನಿರ್ವಹಿಸಿದ್ದ ಅರ್ಜುನ್, ವಸತಿ ಸಚಿವ ಎ.ಕೃಷ್ಣಪ್ಪ ಅವರ ಬೆಂಬಲಿಗರಾಗಿ ಗುರುತಿಸಿ ಕೊಂಡಿದ್ದಾರೆ.

‌ಮಾರ್ಚ್ 19ರಂದು ದೂರು ಕೊಟ್ಟಿರುವ ಅವರು, ‘ಕಾಸಿಫ್ ಅಪರಾಧ ಹಿನ್ನೆಲೆವುಳ್ಳ ವ್ಯಕ್ತಿಯಾಗಿದ್ದು, ನನ್ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾನೆ. ಮಾರ್ಚ್ 16 ರಂದು ದೀಪಾಂಜಲಿನಗರದ ನನ್ನ ಮನೆ ಹತ್ತಿರವೂ ಬಂದು ಹೋಗಿದ್ದಾನೆ. ಈ ವಿಚಾರ ಸ್ನೇಹಿತರಿಂದ ನನಗೆ ಗೊತ್ತಾಯಿತು’ ಎಂದು ದೂರಿನಲ್ಲಿ ಹೇಳಿದ್ದಾರೆ.

ADVERTISEMENT

‘ಕಾಸಿಫ್ ಜತೆ ನಾನು ಯಾವುದೇ ವ್ಯವಹಾರ ಇಟ್ಟುಕೊಂಡಿಲ್ಲ. ಹೀಗಿದ್ದರೂ, ನನ್ನ ಹತ್ಯೆಗೆ ಏಕೆ ಸಂಚು ರೂಪಿಸಿದ್ದಾನೆ ಹಾಗೂ ಆತನಿಗೆ ಸುಪಾರಿ ಕೊಟ್ಟಿರುವವರು ಯಾರು ಎಂಬುದು ಗೊತ್ತಾಗಬೇಕು. ಹಾಗೆಯೇ, ನನಗೆ ಹಾಗೂ ಕುಟುಂಬಕ್ಕೆ ರಕ್ಷಣೆ ನೀಡಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಅಪರಾಧ ಸಂಚು (ಐಪಿಸಿ 120ಬಿ, 503) ಆರೋಪದಡಿ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಕಾಸಿಫ್ ಬಂಧನಕ್ಕೆ ಬಲೆ ಬೀಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.